ಹೊಸದಿಗಂತ ವರದಿ, ಮಡಿಕೇರಿ:
ಬಿಟ್ಟಂಗಾಲ ಸಮೀಪದ 2ನೇ ರುದ್ರಗುಪ್ಪೆಯ ಕಾಫಿ ತೋಟವೊಂದರಲ್ಲಿ ಹುಲಿಯ ಮೃತದೇಹವೊಂದು ಪತ್ತೆಯಾಗಿದ್ದು, ಕಳೆದ ಎರಡು ದಿನಗಳ ಹಿಂದೆಯೇ ಈ ಹುಲಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ಎರಡನೇ ರುದ್ರಗುಪ್ಪೆಯ ತೋತೇರಿ ಬಳಿಯ ನಾಜಗೊಲ್ಲಿ ಎಂಬಲ್ಲಿನ ಕಾಫಿ ತೋಟವೊಂದರಲ್ಲಿ ಹುಲಿಯ ಮೃತದೇಹ ಮಂಗಳವಾರ ಸಂಜೆ ಕಂಡುಬಂದಿದಗದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಹುಲಿಯೊಂದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿತ್ತು. 2ನೇ ರುದ್ರಗುಪ್ಪೆಯ ಸಮೀಪವಿರುವ ಕಂಡಂಗಾಲದಲ್ಲಿ ಕರಿಮೆಣಸು ಕೊಯ್ಯಲು ತೆರಳಿದ್ದ ಕಾರ್ಮಿಕರೊಬ್ಬರ ಮೇಲೆ ದಾಳಿ ನಡೆಸಿ ಸ್ಥಳದಲ್ಲೇ ಕೊಂದು ಹಾಕಿತ್ತು. ಇದಲ್ಲದೆ ಸುತ್ತಮುತ್ತಲಿನ ಹಲವು ಜಾನುವಾರುಗಳ ಮೇಲೆಯೂ ನಿರಂತರವಾಗಿ ದಾಳಿ ನಡೆಸುತ್ತಿತ್ತು.
ಈ ಭಾಗದಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಗ್ರಾಮದಲ್ಲಿ ಬೀಡು ಬಿಟ್ಟು ನಿರಂತರವಾದ ಕಾರ್ಯಾಚರಣೆ ನಡೆಸಿದರೂ ಹುಲಿಯನ್ನು ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ.
ಇದೀಗ ಸಾವಿಗೀಡಾಗಿರುವುದು ಅದೇ ಹುಲಿಯೋ ಅಥವಾ ಬೇರೆಯದ್ದೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.