ಭಾರೀ ಮಳೆಗೆ ಬೆಂಗಳೂರು ಹೈರಾಣ | ಸಾವು-ನೋವು, ಮುಳುಗಡೆ, ಬಿದ್ದ ಮರ, ಜನಜೀವನ ಅಸ್ತವ್ಯಸ್ತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರು ಕೆಲವೇ ಗಂಟೆ ಸುರಿದ ಮಳೆಗೆ ಹೈರಾಣಾಗಿದೆ.
ಒಂದು ಗಂಟೆ ಸುರಿದ ಭಾರೀ ಮಳೆಗೆ ಸಾವು ಸಂಭವಿಸುವಂಥ ಪರಿಸ್ಥಿತಿ ರಾಜಧಾನಿಯಲ್ಲಿ ಎದುರಾಗಿದ್ದು, ಅಂಡರ್‌ಪಾಸ್‌ನಲ್ಲಿದ್ದ ಕಾರ್‌ನಲ್ಲಿ ನೀರು ತುಂಬಿ ಉಸಿರುಗಟ್ಟಿ ಯುವತಿಯೊಬ್ಬಳು ಮೃತಪಟ್ಟಿದ್ದಾರೆ.

ಎಲ್ಲೆಂದರಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಒಂದು ಗಂಟೆಯಷ್ಟೇ ಸುರಿದ ಮಳೆಗೆ ಸಾಕಷ್ಟು ಹಾನಿಯಾಗಿದೆ. ಮಳೆ ಅವಘಡದಲ್ಲಿ ಈ ವರ್ಷದ ಮೊದಲ ಸಾವು ಇದಾಗಿದೆ.

ರಾಜಧಾನಿಯಲ್ಲಿ ಆಲಿಕಲ್ಲು ಮಳೆಗೆ ನೂರಾರು ಮರಗಳು ಧರೆಗುರುಳಿವೆ, ಮಹಾಲಕ್ಷ್ಮಿ ಲೇಔಟ್‌ನ ಮನೆಗಳ ಮುಂದೆ ನೀರು ನಿಂತಿದ್ದು, ಮನೆಯಿಂದ ಹೊರಹೋಗದ ಪರಿಸ್ಥಿತಿ ಎದುರಾಗಿದೆ.ಶನಿವಾರ ಸಂಜೆಯಯೂ ಸುರಿದಿದ್ದ ಮಳೆಗೆ ರಸ್ತೆಗೆ ಬಿದ್ದಿರುವ ಮರಗಳ ತೆರವು ಆಗುವ ಮುನ್ನವೇ ಮತ್ತೆ ಮಳೆ ಸುರಿದಿದ್ದು ಇನ್ನಷ್ಟು ಮರಗಳು ಧರೆಗುರುಳಿವೆ.

ಕುಮಾರಕೃಪ ರಸ್ತೆ ಹಾಗೂ ಮೈಸೂರ್ ಬ್ಯಾಂಕ್ ಸರ್ಕಲ್ ಬಳಿ ಚಲಿಸುತ್ತಿದ್ದ ಕಾರ್‌ಗಳ ಮೇಲೆ ಮರಗಳು ಬಿದ್ದು ಗಾಡಿ ಜಖಂ ಆಗಿದೆ. ಶಿವಾನಂದ ಸರ್ಕಲ್ ಜಲಾವೃತವಾಗಿದ್ದು, ಮೂರು ಅಡಿ ನೀರು ನಿಂತಿದೆ. ಮಹಾಲಕ್ಷ್ಮಿ ಲೇಔಟ್‌ನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಈವರೆಗೂ 400ಕ್ಕೂ ಹೆಚ್ಚು ದೂರುಗಳು ಬಿಬಿಎಂಪಿ ಕಂಟ್ರೋಲ್ ರೂಂಗೆ ಬಂದಿವೆ.

ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಕರೆಂಟ್ ಇಲ್ಲದೆ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. ಆಲಿಕಲ್ಲು ಮಳೆಗೆ ಬೈಕ್ ಸವಾರರು ಗಾಡಿ ಓಡಿಸಲು ಕಷ್ಟಪಟ್ಟಿದ್ದು, ಅರ್ಧಗಂಟೆಯಲ್ಲಿ ಅಂಡರ್‌ಪಾಸ್‌ಗಳೆಲ್ಲ ಹೊಂಡಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!