ಮಾರ್ಚ್ 5ರೊಳಗೆ ಸಾಲ ವಿತರಣೆಯ ಗುರಿ‌ ಸಾಧನೆ: ಸಚಿವ ಸೋಮಶೇಖರ್

ಹೊಸದಿಗಂತ ವರದಿ, ಮಡಿಕೇರಿ:

ಪ್ರಸಕ್ತ ಸಾಲಿನಲ್ಲಿ ರಾಜ್ಯದ 21 ಜಿಲ್ಲಾ ಸಹಕಾರ‌ ಕೇಂದ್ರ ಬ್ಯಾಂಕುಗಳ ಮೂಲಕ ರಾಜ್ಯದ 30.86ಲಕ್ಷ ರೈತರಿಗೆ ಕೆಸಿಸಿ ಸಾಲ ಯೋಜನೆ ಮೂಲಕ 20,810 ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಈಗಾಗಲೇ 20 ಲಕ್ಷ ರೈತರಿಗೆ‌ 14ಸಾವಿರ ಕೋಟಿ ರೂ.ಸಾಲ ವಿತರಿಸಲಾಗಿದೆ. ಮಾರ್ಚ್ 5ರ ಒಳಗಾಗಿ ಈ‌ ಗುರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕುಶಾಲನಗರ ಸಮೀಪದ ಹೆಬ್ಬಾಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ವರ್ಷ ರಾಜ್ಯದ ರೈತರಿಗೆ 16,795 ಕೋಟಿ ಸಾಲ ವಿತರಿಸಲಾಗಿದ್ದು ಶೇ.94 ರಷ್ಟು ವಸೂಲಾತಿ ಮಾಡಲಾಗಿದೆ. ಇದರಿಂದಾಗಿ ರೈತರು ಅರ್ಥಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗಲಿದೆ ಎಂದು ನುಡಿದರು.
ಕೇಂದ್ರ ಸರ್ಕಾರ ಕೃಷಿಗೆ ಉತ್ತೇಜನ ನೀಡುತ್ತಿದ್ದು, ಅದರಂತೆ ಸಹಕಾರ ಕ್ಷೇತ್ರಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಹೆಚ್ಚು ಕೊಡುಗೆಯನ್ನು ನೀಡುತ್ತಿದೆ. ಅದರ ಮೂಲಕ ರೈತರು ಅರ್ಥಿಕವಾಗಿ ಮುಂದುವರೆಯಲು ಸಹಾಯವಾಗುತ್ತದೆ ಎಂದು ಸಚಿವರು ತಿಳಿಸಿದರು.
ಸಮಾನ ವ್ಯವಸ್ಥೆ: ಸಾಲ ವಿತರಣೆಗೆ ಎಲ್ಲಾ ಸಹಕಾರ ಸಂಘಗಳಲ್ಲಿ ಸಮಾನ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ತಾರತಮ್ಯ ಉಂಟಾಗಲು ಅವಕಾಶ ನೀಡಿಲ್ಲ. ಪಂಚಾಯ್ತಿ ವ್ಯಾಪ್ತಿಯಲ್ಲಿ 2-3 ಸಹಕಾರ ಸಂಘಗಳ ಸ್ಥಾಪನೆಯಿಂದ ಅನಾರೋಗ್ಯಕರ ಪೈಪೋಟಿ ಏರ್ಪಡುವ ಕಾರಣ ಪಂಚಾಯತಿಗೊಂದು ಸಹಕಾರ ಸಂಘ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ಇದರಿಂದ ಸಂಘ ಲಾಭದಾಯಕವಾಗಿ ಮುನ್ನಡೆಯಲು ಸಹಕಾರಿಯಾಗಲಿದೆ ಎಂದರು.
ಸಹಕಾರ ಕ್ಷೇತ್ರದ ಸಮಸ್ಯೆಗಳ‌ ಬಗ್ಗೆ ಸದಾ ಧ್ವನಿ ಎತ್ತುವ ಮೂಲಕ ಅವುಗಳ ಪರಿಹಾರಕ್ಕೆ‌ ಶಾಸಕ ಅಪ್ಪಚ್ಚುರಂಜ‌ನ್ ಅವರು ವಹಿಸುತ್ತಿರುವ ಕಾಳಜಿ‌ ಶ್ಲಾಘನೀಯ ಎಂದು ಸಚಿವರು‌ ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಪಿಗಳ ಆಸ್ತಿ ಜಪ್ತಿ: ಕೇಂದ್ರದಲ್ಲಿ ಸಹಕಾರ ಸಚಿವಾಲಯ ಪ್ರತ್ಯೇಕವಾಗಿ ಸ್ಥಾಪನೆಯಾದ ಬಳಿಕ‌ ಕ್ಷೇತ್ರದ ಪ್ರಗತಿ ಯೋಜನೆಗಳು ರೂಪುಗೊಳ್ಳುತ್ತಿವೆ. ಜಿಲ್ಲೆಯಲ್ಲಿ ಶೇ. 98ರಷ್ಟು ಸಹಕಾರ ಸಂಘಗಳು ಲಾಭದಲ್ಲಿದ್ದು, ಎರಡು ಸಂಘಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ, ವಂಚನೆ ಪ್ರಕರಣಗಳಿಂದ ಇಡೀ ಕ್ಷೇತ್ರಕ್ಕೆ ಕಳಂಕ ಉಂಟಾಗಿದೆ. ಈ ಪ್ರಕರಣಗಳಲ್ಲಿ ಉಂಟಾಗಿರುವ ವಂಚನೆ ಸರಿದೂಗಿಸಲು ಆರೋಪಿಗಳ ಆಸ್ತಿ ಜಪ್ತಿ‌ ಮಾಡಿ ವಂಚನೆ‌ ಮೊತ್ತ ಮರುಪಾವತಿಗೆ ಸೂಚಿಸಲಾಗಿದೆ ಎಂದು ಸಚಿವ ಸೋಮಶೇಖರ್ ನುಡಿದರು.
ಸಕಾಲದಲ್ಲಿ ಆಡಿಟ್ ವರದಿಗಳು ಸಿದ್ಧವಾದಲ್ಲಿ ಮಾತ್ರ ಇಂತಹ ವಂಚನೆಗಳ ಬಗ್ಗೆ ನಿಗಾವಹಿಸಲು ಸಾಧ್ಯ ಎಂದ ಅವರು, ಜಿಲ್ಲೆಯ ಡಿಸಿಸಿ ಬ್ಯಾಂಕ್’ಗೆ ಬಾಕಿ ಉಳಿದಿರುವ 10 ಕೋಟಿ ರೂ.ಗಳ ಸಾಲ‌ ಮನ್ನಾ ಯೋಜನೆ ಮೊತ್ತ ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶುದ್ಧ ಹಸ್ತರಾಗಿರಬೇಕು: ಮಳಿಗೆಗಳನ್ನು ಉದ್ಘಾಟಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಸಹಕಾರ ಸಂಘಗಳ ಆಡಳಿತ ಮಂಡಳಿ ಶುದ್ಧ ಹಸ್ತ ಹೊಂದಿದಾಗ ಮಾತ್ರ ಆ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಖಾಸಗಿ ಬ್ಯಾಂಕುಗಳಿಗಿಂತ ಕಡಿಮೆ ಅವಧಿಯಲ್ಲಿ 5 ಲಕ್ಷ ರೂ.ವರೆಗೆ ಸಾಲ ವಿತರಣೆ ಸೌಲಭ್ಯ ಸಹಕಾರ ಸಂಘಗಳ‌ ಮೂಲಕ ಆಗುತ್ತಿದೆ. ಇಂತಹ ಸೌಲಭ್ಯ ಪಡೆದ ರೈತರು, ಸಾಲಗಾರರು ಕೂಡಾ ಸಂಘದ ಮೂಲಕ‌ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಪ್ರಗತಿಯಲ್ಲಿ ಕೈಜೋಡಿಸಬೇಕಿದೆ ಎಂದರು.
ಈ ಹಿಂದಿನ ಸರಕಾರಗಳು ನಷ್ಟದಲ್ಲಿರುವ ಸಹಕಾರ ಸಂಘಗಳನ್ನು ವಿಲೀನಗೊಳಿಸುವ ಕಾರ್ಯ ಮಾಡುತ್ತಿದ್ದವು. ಆದರೆ ಇಂದಿನ ಸರಕಾರ ಗ್ರಾಮ ಪಂಚಾಯ್ತಿಗೆ ಒಂದು ಸಹಕಾರ ಸಂಘ ಸ್ಥಾಪನೆಯ ಚಿಂತನೆ ಹೊಂದಿದೆ. ರಾಜ್ಯ ಸಹಕಾರ ಸಂಘಗಳ ಡಿಜಿಟಲೀಕರಣ ವ್ಯವಸ್ಥೆ ಕಾರ್ಯ ಕೂಡ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಸಹಕಾರ ಸಂಘಗಳ ಮೂಲಕ ರೈತರ ಆರ್ಥಿಕ ಅಭಿವೃದ್ದಿಯೊಂದಿಗೆ ದೇಶದ ಆರ್ಥಿಕ ಸ್ಥಿತಿ ಕೂಡಾ ಪ್ರಗತಿ ಹೊಂದಲು ಸಾಧ್ಯವಿದೆ. ಅತಿವೃಷ್ಟಿಯಿಂದ ಬೆಳೆ ನಾಶ ಹೆಚ್ಚಾಗಿದ್ದು ರೈತರು ಸಕಾಲದಲ್ಲಿ ಸಾಲ‌ ಮರುಪಾವತಿ ಮಾಡಲು ಕಷ್ಟವಾಗಿದೆ. ಇದಕ್ಕೆ ಸರಕಾರ ವಿಶೇಷ ಯೋಜನೆ ರೂಪಿಸಿ ಬೆಳೆಗಾರರಿಗೆ, ರೈತರಿಗೆ ಹೆಚ್ಚಿನ ಸಹಕಾರ ನೀಡಬೇಕಿದೆ ಎಂದರು.
ನಗದು ಕೌಂಟರ್ ಉದ್ಘಾಟಿಸಿ ಮಾತನಾಡಿದ ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ, 115 ವರ್ಷಗಳ ಇತಿಹಾಸ ಹೊಂದಿರುವ ಜಿಲ್ಲೆಯ ಸಹಕಾರ ಕ್ಷೇತ್ರ ರಾಜ್ಯದಲ್ಲಿಯೇ ಉತ್ತಮ‌ ಹೆಸರು ಗಳಿಸಿದೆ ಎಂದರು.
ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ.ಪರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘವು ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಧುರೀಣರು ಹಾಗೂ ಉತ್ತಮ‌ ಕಾರ್ಯನಿರ್ವಹಣೆ ತೋರಿದ ಅಧಿಕಾರಿ, ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಹೆಬ್ಬಾಲೆ ಗ್ರಾ.ಪಂ. ಅಧ್ಯಕ್ಷ ಎಚ್‌.ಎಸ್.ಮಂಜುನಾಥ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಡಿ.ಮಂಜುನಾಥ್, ಬಿ.ಕೆ.ಚಿಣ್ಣಪ್ಪ, ಭರತ್ ಕುಮಾರ್, ಸಹಕಾರ ಸಂಘಗಳ‌ ಉಪ ನಿಬಂಧಕ ಸಲೀಂ, ಸಹಾಯಕ‌ ನಿಬಂಧಕ ಎಚ್.ಡಿ.ರವಿಕುಮಾರ್, ಜಿ.ಪಂ‌. ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಮಾಜಿ ಸದಸ್ಯ ಎಚ್.ಆರ್.ಶ್ರೀನಿವಾಸ್, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕೊಮಾರಪ್ಪ, ಉಪಾಧ್ಯಕ್ಷ ಟಿ.ಬಿ.ಜಗದೀಶ್, ನಿರ್ದೇಶಕ ಎಚ್.ಟಿ.ನಾಗೇಶ್, ಶಿರಂಗಾಲ ಸರಕಾರ ಸಂಘದ ಅಧ್ಯಕ್ಷ ಸಿ.ಎನ್.ಲೋಕೇಶ್, ಹೆಬ್ಬಾಲೆ ಸಂಘದ ಉಪಾಧ್ಯಕ್ಷೆ ಕವಿತಾ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎನ್.ಗಿರೀಶ್, ಸಂಘದ ನಿರ್ದೇಶಕರುಗಳು, ಸಿಬ್ಬಂದಿಗಳು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!