ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ಕುತುಬ್ ಮಿನಾರ್ ಆವರಣದಲ್ಲಿರುವ ಕುವ್ವಾತ್-ಉಲ್-ಇಸ್ಲಾಂ ಮಸೀದಿಯಲ್ಲಿ ಹಿಂದೂಗಳು ಮತ್ತು ಜೈನರಿಗೆ ಪೂಜೆ ಮಾಡುವ ಹಕ್ಕನ್ನು ಮರುಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ದೆಹಲಿ ನ್ಯಾಯಾಲಯವು ಮುಂದೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಅರ್ಜಿಯೊಂದನ್ನು ಸಲ್ಲಿಸಿರುವುದರಿಂದ ತೀರ್ಪನ್ನು ಮುಂದೂಡಲಾಗಿದೆ ಎಂದು ಕೋರ್ಟ್ ಹೇಳಿದೆ.
ಕುತುಬ್ ಮಿನಾರ್ ನಲ್ಲಿ ಪೂಜೆಗೆ ಅವಕಾಶ ಮಾಡಿಕೊಡುವುದಕ್ಕೆ ಉತ್ತರಿಸಿರುವ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ವು “12 ನೇ ಶತಮಾನದ ವಿಶ್ವಪರಂಪರೆಯ ತಾಣವಾಗಿರುವ ಕುತುಬ್ ಮಿನಾರ್ ಯಾವುದೇ ಧರ್ಮದ ಪ್ರಾರ್ಥನಾ ಸ್ಥಳವಲ್ಲ. ಅದೊಂದು ರಕ್ಷಿತ ಸ್ಥಳವಾಗಿರುವುದರಿಂದ ಕಾನೂನಿನ ಅಡಿಯಲ್ಲಿ ಅದನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ. 1914ರಿಂದಲೂ ಆ ಪ್ರದೇಶವನ್ನು ಸಂರಕ್ಷಿಸಲಾಗಿದೆ. ಇದು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆ, 1958 ರ ರಕ್ಷಣೆಯ ಅಡಿಯಲ್ಲಿ ಬರುತ್ತದೆ. ಸ್ಮಾರಕದಲ್ಲಿ ಯಾವುದೇ ಹೊಸ ಅಭ್ಯಾಸವನ್ನು ಪ್ರಾರಂಭಿಸಲು ಅನುಮತಿಸದಿರುವುದು ರಕ್ಷಣೆಯ ಮೂಲ ಉದ್ದೇಶವಾಗಿದೆ. ರಕ್ಷಿತ ಸ್ಮಾರಕವಾಗಿರುವ ಕಾಲದಿಂದಲೂ ಯಾವುದೇ ಸಮುದಾಯವು ಕುತುಬ್ ಮಿನಾರ್ನಲ್ಲಿ ಅಥವಾ ಸಂಕೀರ್ಣದ ಒಳಗೆ ಎಲ್ಲಿಯೂ ಪೂಜೆ ಮಾಡಿಲ್ಲ. ಅದು 27ನ ಹಿಂದೂ ಮತ್ತು ಜೈನ ದೇವಾಲಯವನ್ನು ಕೆಡವಿ ಕಟ್ಟಲಾಗಿದೆಯೆಂಬುದು ನಿಜವಾದರೂ ಈಗ ಮತ್ತೆ ಪೂಜೆಯನ್ನು ಪುನಃ ಪ್ರಾರಂಭಿಸುವ ಬದಲು ಅದನ್ನು ಸಂರಕ್ಷಿತವಾಗಿಡುವುದು ಉತ್ತಮ” ಎಂದಿದೆ.
ಕುತುಬ್ ಮಿನಾರ್ ನಲ್ಲಿ ಪೂಜೆಗೆ ಅನುಮತಿ ಕೇಳಿ ಹಿಂದೂ ಪರ ವಕೀಲರಾದ ವಿಷ್ಣುಶಂಕರ ಜೈನ್ ಹಾಗೂ ರಂಜನಾ ಅಗ್ನಿಹೋತ್ರಿ ತಮ್ಮ ಅರ್ಜಿಯಲ್ಲಿ 27 ದೇವಾಲಯಗಳನ್ನು ಹೇಗೆ ಕೆಡವಲಾಯಿತು ಮತ್ತು ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ಕುವ್ವಾತ್-ಉಲ್-ಇಸ್ಲಾಂ ಮಸೀದಿಯನ್ನು ಹೇಗೆ ಬೆಳೆಸಲಾಯಿತು ಎಂಬುದನ್ನು ಉಲ್ಲೇಖಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ಜೀರ್ಣೋದ್ಧಾರ ಮಾಡಬೇಕಾದ ದೇವಾಲಯಗಳ ನಿರ್ವಹಣೆಗಾಗಿ ಟ್ರಸ್ಟ್ ರಚಿಸುವಂತೆ ಮತ್ತು ದೇವಾಲಯಗಳ ನಿರ್ವಹಣೆಯನ್ನು ಅದಕ್ಕೆ ಹಸ್ತಾಂತರಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. ಕುತುಬ್ ಮಿನಾರ್ ಆವರಣದಲ್ಲಿ ಶ್ರೀ ಗಣೇಶ, ವಿಷ್ಣು ಮತ್ತು ಯಕ್ಷರಂತಹ ಹಿಂದೂ ದೇವರುಗಳ ಸ್ಪಷ್ಟ ಚಿತ್ರಗಳು” ಮತ್ತು ಕಲಶ ಮತ್ತು ಪವಿತ್ರ ಕಮಲದಂತಹ ಹಲವಾರು ಚಿಹ್ನೆಗಳು, ಜೊತೆಗೆ ದೇವಾಲಯದ ಬಾವಿಗಳಿವೆ. ಅವು ಕಟ್ಟಡದ ಹಿಂದು ಮೂಲವನ್ನು ಸೂಚಿಸುತ್ತದೆ ಎಂದು ವಿಷ್ಣು ಶಂಕರ ಜೈನ್ ಪ್ರತಿಪಾದಿಸಿದ್ದಾರೆ.