ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಆಪ್ರಿಕಾ ವಿರುದ್ಧ ಆಘಾತಕಾರಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ದಿನೇಶ್ ಕಾರ್ತಿಕ್ ಬೆನ್ನುನೋವಿನಿಂದ ಬಳಲುತ್ತಿದ್ದು ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಆಡುವುದು ಅನುಮಾನವಾಗಿದೆ.
ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಪ್ರದರ್ಶನ ಅಷ್ಟೇನು ಉತ್ತಮವಾಗಿಲ್ಲ. ಆಪ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯ ಜೊತೆಗಿನ 52 ರನ್ಗಳ ಪಾಲುದಾರಿಕೆಯಲ್ಲಿ ದಿನೇಶ್ 15 ಎಸೆತಗಳಲ್ಲಿ ಕೇವಲ ಆರು ರನ್ ಗಳಿಸಿದರು. 15ನೇ ಓವರ್ನ ಕೊನೆಯಲ್ಲಿ ಕಾರ್ತಿಕ್ ಬೆನ್ನನ್ನು ನೋವಿನಿಂದ ಒದ್ದಾಡುತ್ತಿದ್ದುದು ಕಾಣುತ್ತಿತ್ತು.
ಅವರ ಗಾಯದ ನಿಖರವಾದ ಸ್ವರೂಪವು ತಿಳಿದಿಲ್ಲವಾದರೂ, ಗಂಭೀರ ಸ್ವರೂಪದಂತೆ ತೋರುತ್ತಿದೆ. ಕಾರ್ತಿಕ್ ಪಂದ್ಯಕ್ಕೂ ಅಭ್ಯಾಸದ ವೇಳೆ ಗಾಯಗೊಂಡಿದ್ದ ವಿಡಿಯೋಗಳು ವೈರಲ್ ಆಗಿದ್ದವು.
ಆಫ್ರಿಕಾ ಬ್ಯಾಟಿಂಗ್ ವೇಳೆ ಕಾರ್ತಿಕ್ ಅರ್ಧದಲ್ಲೇ ಮೈದಾನ ತೊರೆದಿದ್ದರು. ಆ ಬಳಿಕ ರಿಷಭ್ ಪಂತ್ ಕೊನೆಯ ಐದು ಓವರ್ಗಳಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು.
ಅವರಿಗೆ ಬೆನ್ನಿನ ಗಾಯವಾಗಿದೆ ಎಂದು ಸಹ ಆಟಗಾರ ಭುವನೇಶ್ವರ್ ಕುಮಾರ್ ಖಚಿತಪಡಿಸಿದ್ದಾರೆ. “ಅವರಿಗೆ ಸ್ವಲ್ಪ ಬೆನ್ನಿನ ಸಮಸ್ಯೆ ಇದೆ ಎಂದು ನನಗೆ ತಿಳಿದಿದೆ. ಫಿಸಿಯೋ ವರದಿಯನ್ನು ನೀಡಿದಬಳಿಕ ನಮಗೆ ಹೆಚ್ಚಿನ ಸ್ಪಷ್ಟತೆ ಸಿಗುತ್ತದೆ” ಎಂದು ಭುವನೇಶ್ವರ್ ಪಂದ್ಯದ ನಂತರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಭಾರತವು ನವೆಂಬರ್ 2 ರಂದು ಅಡಿಲೇಡ್ನಲ್ಲಿ ಬಾಂಗ್ಲಾದೇಶವನ್ನು ಆಡಲಿದ್ದು ಕಾರ್ತಿಕ್ ಫಿಟ್ ಆಗಲು ಕೇವಲ 72 ಗಂಟೆಗಳಷ್ಟೇ ಲಭಿಸಲಿದೆ. ಇದರಲ್ಲಿ ಅಡಿಲೇಡ್ಗೆ ಪ್ರಯಾಣದ ದಿನವೂ ಸೇರಿದೆ. ಬೌಲಿಂಗ್ ಸ್ನೇಹಿ ಆಸ್ಟ್ರೇಲಿಯನ್ ಟ್ರ್ಯಾಕ್ಗಳಲ್ಲಿ ಕೀಪರ್ ಗಳಿಗೆ ಹೆಚ್ಚಿನ ಸವಾಲು ಇರುತ್ತದೆ. ಭಾರತ ಮುಂದಿನ ನವೆಂಬರ್ 2 ರಂದು (ಬುಧವಾರ) ಬಾಂಗ್ಲಾದೇಶವನ್ನು ಎದುರಿಸಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ