ಬಿಜೆಪಿ ಸೇರಿದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ

 ಹೊಸ ದಿಗಂತ ವರದಿ, ಹೊನ್ನಾವರ:

ತಾಲೂಕಿನ ಹಳದೀಪುರದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಅವರು ಸೋಮವಾರ ಸಹಸ್ರಾರು ಅಭಿಮಾನಿಗಳೊಂದಿಗೆ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೇವಲ ಹಣವನ್ನು ನೋಡಿ, ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ಹೊಸಬರನ್ನು ತಂದು ನಿಲ್ಲಿಸಲಾಗಿರುವುದು ಎಲ್ಲಾ ಕಾರ್ಯಕರ್ತರಿಗೆ ನೋವಾಗಿದೆ. ಹೀಗಾಗಿ ಈಸಲ ಕಾರ್ಯಕರ್ತರ ಮಾತಿನಂತೆ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.
ಕಾಂಗ್ರೆಸ್‌ಗೆ ಕೇವಲ ಬಿಜೆಪಿ ಟೀಕಿಸುವುದೇ ಕೆಲಸವಾಗಿದೆ. ಲಕ್ಷ್ಮಣ ಸವದಿ ಅವರ ಬಗ್ಗೆ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡಿಸಿದ ಕಾಂಗ್ರೆಸ್ ಈಗ ಅವರನ್ನೇ ಕರೆದು ಟಿಕೆಟ್ ನೀಡಿದೆ. ಕಾಂಗ್ರೆಸ್ ಅನ್ನು ಸೋಲಿಸಲು ಬಿಜೆಪಿಯ ದಿನಕರ ಶೆಟ್ಟಿ ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿ ಗೆಲುವಿಗೆ ಎಲ್ಲಾ ಕಾರ್ಯಕರ್ತರು ಶ್ರಮ ವಹಿಸಬೇಕೆಂದು ಕರೆ ನೀಡಿದರು.
ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಮಾತನಾಡಿ, ಶಿವಾನಂದ ಹೆಗಡೆ ಅವರು ಬಿಜೆಪಿಗೆ ಬಂದಿದ್ದು ನನ್ನ ಅದೃಷ್ಟ. ಶಿವಾನಂದ ಹೆಗಡೆಯವರ ಅಭಿಮಾನಿಗಳಿಂದ ನನ್ನ ಗೆಲುವು ನಿಶ್ಚಿತ ಎಂದರು.
ಗೋವಾದ ಶಾಸಕ ಕೃಷ್ಣ ಸಾಲ್ಕರ್ ಮಾತನಾಡಿ, ಈ ಕ್ಷೇತ್ರದಲ್ಲಿ ಓಡಾಡುವಾಗ ಶಿವಾನಂದ ಹೆಗಡೆ ಸವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಸರಿಯಾದ ವ್ಯಕ್ತಿ ತಪ್ಪಾದ ಪಕ್ಷದಲ್ಲಿ ಇದ್ದರು. ಇದೀಗ ಬಿಜೆಪಿ ಗೆ ಬಂದು ಎಲ್ಲವೂ ಸರಿಯಾಗುತ್ತಿದೆ ಎಂದರು.
ಜಿಲ್ಲಾ ಚುನಾವಣಾ ಸಂಚಾಲಕ ಕೆ.ಜಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಎಂ.ಜಿ ಭಟ್ಟ, ಸುಬ್ರಾಯ ವಾಳ್ಕೆ, ವೆಂಕಟ್ರಮಣ ಹೆಗಡೆ, ನಾಗರಾಜ ನಾಯ್ಕ ತೊರ್ಕೆ ಇತರರಿರಿದ್ದರು. ರಾಜು ಭಂಡಾರಿ ಸ್ವಾಗತಿಸಿದರು. ಮಂಜುನಾಥ ನಾಯ್ಕ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!