ಹೊಸದಿಗಂತ ವರದಿ, ಬನವಾಸಿ:
ಜಿಲ್ಲೆಯಾದ್ಯಂತ ಸುರಿಯುತ್ತಿರುವ ವಿಪರೀತ ಮಳೆಯ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಿರುವುದು ವಿಳಂಬವಾಗಿದ್ದರಿಂದ ಶಾಲಾ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದರು. ಮೂರು ದಿನಗಳಿಂದ ಮಳೆಯ ಅರ್ಭಟ ಜೋರಾಗಿತ್ತು. ಸೋಮವಾರ ರಾತ್ರಿಯೇ ಮಂಗಳವಾರದ ರಜೆ ಘೋಷಣೆ ಮಾಡಬಹುದಾಗಿತ್ತು. ಅದರೆ ಜಿಲ್ಲಾಧಿಕಾರಿಗಳು ಮುಂಜಾನೆ 8-30ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬಂದ ನಂತರ ರಜೆ ಘೋಷಣೆ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ ಎಂದು ಪೋಷಕರು, ವಿದ್ಯಾರ್ಥಿಗಳು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹಳ್ಳಿಯ ವಿದ್ಯಾರ್ಥಿಗಳಿಗೆ ಸರಿಯಾದ ಬಸ್, ವಾಹನ ವ್ಯವಸ್ಥೆ ಇಲ್ಲದೇ ಮಳೆಯಲ್ಲೇ ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ಕಾಲ ಕಳೆಯಬೇಕಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವಕ್೯ ಸಮಸ್ಯೆಯಿಂದಾಗಿ ಕೆಲವು ವಿದ್ಯಾರ್ಥಿಗಳು ಪೋಷಕರನ್ನು ಸಂಪರ್ಕಿಸಲು ಸಾಧ್ಯವಾಗದೇ ಪರದಾಡಿದರು. ಮಕ್ಕಳ ವಿಷಯದಲ್ಲಿ ಅಧಿಕಾರಿಗಳು ಈ ರೀತಿಯ ಬೇಜವಾಬ್ದಾರಿ ವಹಿಸುವುದು ಸರಿಯಲ್ಲ ಎಂದು ಭಾಶಿ ಗ್ರಾಮದ ವಿರೇಂದ್ರಗೌಡ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಮನೆಯವರಿಗೆ ಸಂಪರ್ಕ ಸಿಗುತ್ತಿಲ್ಲ ಊರಿಗೆ ಹೋಗುವುದಕ್ಕೆ ಬಸ್, ವಾಹನವು ಇಲ್ಲ ನಾವು ನಡೆದುಕೊಂಡು ಹೋಗಬೇಕು ಎಂದು ವಿದ್ಯಾರ್ಥಿನಿಯೊಬ್ಬಳು ಬೇಸರ ವ್ಯಕ್ತ ಪಡಿಸಿದಳು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ