ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಸಿಎಂ ಕುರ್ಚಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಿಎಂ ರೇಸ್ನಲ್ಲಿದ್ದು, ಹೈ ಕಮಾಂಡ್ ಸೂಚಿಸಿದವರು ಸಿಎಂ ಆಗಲಿದ್ದಾರೆ.
ಸಿಎಂ ಕುರ್ಚಿಗೆ ಭಾರೀ ಪೈಪೋಟಿ ಎದುರಾಗಿದ್ದು, ಈ ಕಗ್ಗಂಟನ್ನು ಬಿಡಿಸೋಕೆ ಹೈಕಮಾಂಡ್ ನಾಯಕರನ್ನು ದೆಹಲಿಗೆ ಕರೆಸಿದೆ. ಸಿದ್ದರಾಮಯ್ಯ ಈಗಾಗಲೇ ದೆಹಲಿ ಸೇರಿದ್ದು, ಡಿ.ಕೆ. ಶಿವಕುಮಾರ್ ಅನಾರೋಗ್ಯದ ಕಾರಣ ಇಲ್ಲೇ ಉಳಿದಿದ್ದರು. ಇಂದು ಬೆಳಗ್ಗೆ ಅವರು ದೆಹಲಿಗೆ ತೆರಳಿದ್ದು, ಹೈ ಕಮಾಂಡ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಹಾಗಾಗಿ ಇಂದು ಸಿಎಂ ಯಾರು ಎನ್ನುವ ವಿಷಯ ಫೈನಲ್ ಆಗುವ ಎಲ್ಲಾ ಸಾಧ್ಯತೆಗಳಿವೆ. ರಾಜ್ಯದಿಂದ ಈಗಾಗಲೇ ಎಐಸಿಸಿ ವೀಕ್ಷಕರು ವರದಿ ಪಡೆದಿದ್ದು, ಖರ್ಗೆ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಿಎಂ ಸ್ಥಾನಕ್ಕೆ ಭಾರೀ ಪೈಪೋಟಿ ವ್ಯಕ್ತವಾಗಿದ್ದು, ಸಿಎಂ ಸ್ಥಾನ ಅಲಂಕರಿಸೋದು ಯಾರು ಅನ್ನೋ ದೊಡ್ಡ ಚರ್ಚೆ ನಡೆದಿದೆ.
ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ. ಆದರೆ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲಿದ್ದಾರೆ. ಪಕ್ಷದ ಮುಂದಿನ ಭವಿಷ್ಯ ಏನು ಎಂದು ಖರ್ಗೆ ಪ್ರಶ್ನೆ ಇಟ್ಟಿದ್ದಾರೆ. ಇಂದು ಎಲ್ಲ ಚರ್ಚೆಗಳು ಮುಗಿದು ಸಿಎಂ ಯಾರಾಗುತ್ತಾರೆ ಎನ್ನುವ ವಿಷಯ ಬಹಿರಂಗವಾಗಲಿದೆ.