ಹೊಸದಿಗಂತ ವರದಿ ಮೈಸೂರು:
ಧರ್ಮ- ಧರ್ಮಗಳ ನಡುವೆ ಬೆಂಕಿ ಹಚ್ಚಲು ಮತ ಕೇಳುತ್ತಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ನನ್ನ ಹೋರಾಟ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕಲ್ಲಂಗಡಿ ಹಣ್ಣು ಒಡೆದಾಗ ತೋರಿದ ಅನುಕಂಪ ತಲೆ ಒಡೆದಾಗ ಏಕೆ ತೋರಲಿಲ್ಲ ಎಂಬ ಬಿಜೆಪಿ ರಾಷ್ಟ್ರೀ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಮಾತಿನ ಅರ್ಥ ಏನು..? ನಾವು ರಾಜ್ಯದಲ್ಲಿ ತಲೆ ಒಡೆಯುತ್ತಲೇ ಇರುತ್ತೇವೆ, ನೀವು ಸಾಂತ್ವನ ಹೇಳುತ್ತಲೇ ಇರಿ ಎನ್ನುವ ಹಾಗಿದೆ ಅವರ ಮಾತಿನ ಅರ್ಥ ಎಂದು ತಿರುಗೇಟು ನೀಡಿದರು.
ಈ ಬಾರಿ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಕೇವಲ 30 ರಿಂದ 40 ಸ್ಥಾನಗಳಿಸುವುದಕ್ಕಾಗಿ ಹೋರಾಟ ಮಾಡುವುದಲ್ಲ, ಬದಲಾಗಿ ಪೂರ್ಣ ಪ್ರಮಾಣದ ಸರ್ಕಾರ ತರಲು ಈ ಹೋರಾಟ ಮಾಡುತ್ತೇನೆ. ಬರುವ ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದ ಜನರು ಜೆಡಿಎಸ್ಗೆ ಸ್ಪಷ್ಟ ಬಹುಮತ ನೀಡಿ ಸರ್ಕಾರವನ್ನು ಅಧಿಕಾರಕ್ಕೆ ತಂದರೆ, ಐದು ವರ್ಷದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತರುತ್ತೇನೆ, ಇಲ್ಲದಿದ್ದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ತಾಯಿ ಚಾಮುಂಡೇಶ್ವರಿ ಮುಂದೆ ಕುಮಾರಸ್ವಾಮಿ ಶಪಥ ಮಾಡಿದ್ದಾರೆ.
ಮೇಕೆದಾಟುವಿಗೆ ಪರ್ಯಾಯ ಯಾತ್ರೆ ಅಲ್ಲ, ಪಕ್ಷದಿಂದ ಪ್ರಾರಂಭಿಸುತ್ತಿರುವ ಜನತಾ ಜಲಧಾರೆ ಯಾತ್ರೆ, ಕಾಂಗ್ರೆಸ್ನ ಮೇಕೆದಾಟು ಯೋಜನೆಯ ಜಾರಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆಗೆ ಪರ್ಯಾಯವಲ್ಲ. ಕಾಂಗ್ರೆಸ್ನವರು ಶೋಕಿಗಾಗಿ ನಡೆಸಿದ ಯಾತ್ರೆ ಅದು. ನಮ್ಮದು ಜನರ ಮುಂದೆ ಸಮಸ್ಯೆ ಬಿಚ್ಚಿಡುವ ಯಾತ್ರೆ. ನಾನು ಮಾತನಾಡಲ್ಲ, ನನಗೆ ಕೆಲಸ ಮುಖ್ಯ, ನನ್ನ ಕೆಲಸ ಮಾತನಾಡಬೇಕು ಎಂದರು.
ಪರ್ಯಾಯ ಪಾದಯಾತ್ರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ನೀವು ಯಾವ ಕೆಲಸ ಮಾಡುತ್ತಿದ್ದೀರಿ, ರಾಯಚೂರಿನಲ್ಲಿ ಸಾರ್ವಜನಿಕವಾಗಿ ತಲ್ವಾರ್ ಹಿಡಿದು ಮಾತನಾಡಿದ್ದಾರೆ ಅವರನ್ನು ಅರೆಸ್ಟ್ ಮಾಡಿದ್ದೀರಾ..?. ಸಮಾಜದಲ್ಲಿ ಧರ್ಮಕ್ಕಿಂತ ಪ್ರೀತಿ ಬಾಂಧವ್ಯ ಮುಖ್ಯ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮನಸಿನ ಮಾತು ಹೇಳಿದ್ದಾರೆ
ಸೋಮವಾರ ಕಾರ್ಯಕ್ರಮವೊಂದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಿರಿ ಎಂಬ ಹೇಳಿಕೆ ಬಾಯ್ತಪ್ಪಿನಿಂದ ಬಂದ ಮಾತಲ್ಲ, ಅದು ಅವರ ಮನಸಿನ ಮಾತು ಎಂದರು. ನಮ್ಮ ಪಕ್ಷ ಬಿಟ್ಟು ಹೋಗಿರುವ ಹಾಗೂ ಬಿಡಲು ಸಿದ್ದರಾಗಿರುವ ಹಾಗೂ ವಾಪಸ್ ಬರುವವರಿಗೆ ಸ್ವಾಗತ. ಆದರೆ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದರೆ ಅವಕಾಶವಿಲ್ಲ. ಈ ಮಾತು ಶಾಸಕ ಜಿ.ಟಿ.ದೇವೇಗೌಡ ಅವರಿಗೂ ಅನ್ವಯಿಸುತ್ತದೆ ಎಂದು ಹೇಳಿದರು.