ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಗುರು ಪೋಪ್ ಫ್ರಾನ್ಸಿಸ್ ಇಂದು ತಮ್ಮ 88ನೇ ವಯಸ್ಸಿನಲ್ಲಿ ಶ್ವಾಸಕೋಶದ ಸೋಂಕಿನಿಂದ ನಿಧನರಾದರು.
ಈಸ್ಟರ್ ಭಾನುವಾರದ ಪ್ರಯುಕ್ತ ನಿನ್ನೆ(ಏ.20) ಸೈಂಟ್ ಪೀಟರ್ ಬೆಸಿಲಿಕದಲ್ಲಿ ಗಾಲಿ ಕುರ್ಚಿಯಲ್ಲಿಯೇ ಕುಳಿತು ಅನುಯಾಯಿಗಳಿಗೆ ದರ್ಶನ ನೀಡಿದ್ದರು.
ಈ ವೇಳೆ ಪೋಪ್ ಫ್ರಾನ್ಸಿಸ್ ಅವರ ಪರವಾಗಿ ಮತ್ತೊಬ್ಬರು ಈಸ್ಟರ್ ಭಾಷಣವನ್ನು ಓದಿದ್ದು, ವಿಶ್ವದಲ್ಲಿ ನಡೆಯುತ್ತಿರುವ ಹಲವಾರು ಸಂಕಷ್ಟ, ಯುದ್ಧಗಳ ಬಗ್ಗೆ ಮಾತನಾಡಿದ್ದು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಇತರರ ಅಭಿಪ್ರಾಯಗಳನ್ನು ಗೌರವಿಸದ ಹೊರತು ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ. ನಾವು ಸಾವಿಗಾಗಿ ಅಲ್ಲ ಬದುಕುವುದಕ್ಕಾಗಿ ಇಲ್ಲಿ ಇದ್ದೇವೆ ಎಂದು ಹೇಳಿದ್ದರು.
ಉಕ್ರೇನ್ನಲ್ಲಿ ಯುದ್ಧ ನಿಲ್ಲಿಸಲು ಕರೆ ಕೊಟ್ಟ ಪೋಪ್, ಯುದ್ಧದಿಂದ ನಲುಗಿರುವ ಉಕ್ರೇನ್ಗೆ ಈಸ್ಟರ್ ಉಡುಗೊರೆಯಾಗಿ ಆ ದೇವರು ಶಾಂತಿಯನ್ನು ದಯಪಾಲಿಸಲಿ. ಶಾಶ್ವತ ಶಾಂತಿಗಾಗಿ ನಡೆಯುತ್ತಿರುವ ಎಲ್ಲ ಪ್ರಯತ್ನಗಳು ಸಫಲವಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಗಾಜಾದ ಜನರು ಮತ್ತು ಅದರ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ನಾನು ಚಿಂತಾಕ್ರಾಂತನಾಗಿದ್ದೇನೆ. ಭೀಕರ ಸಂಘರ್ಷವು ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತಿದೆ. ಶೋಚನೀಯ ಅವಮಾನವೀಯ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದರು.
ಹಿಂಸಾಚಾರ, ಸಂಘರ್ಷಕ್ಕೆ ಬಲಿಯಾಗಿರುವ ಆಫ್ರಿಕಾದ ಜನರಿಗಾಗಿ ಪೋಪ್ ಮಿಡಿದಿದ್ದಾರೆ. ತಮ್ಮ ಕೊನೆಯ ಭಾಷಣದಲ್ಲಿ ಮಿಲಿಟರಿ ಸಂಘರ್ಷ ಮತ್ತು ಭೂಕಂಪದಿಂದ ಬಳಲುತ್ತಿರುವ ಮ್ಯಾನ್ಮಾರ್ ಜನರಿಗಾಗಿ ಪೋಪ್ ಪ್ರಾರ್ಥಿಸಿದ್ದಾರೆ.