ಹೊಸದಿಗಂತ ವರದಿ,ವಿಜಯನಗರ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಭೇಟಿ ಮಾಡಿರುವದಕ್ಕೆ ರಾಜಕೀಯ ಬಣ್ಣ ಕಲ್ಪಿಸುವುದು ಬೇಡ, ಅದೊಂದು ಕುಶಲೋಪರಿ ಭೇಟಿಯಾಗಿದೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಸಚಿವ ಆನಂದ್ ಸಿಂಗ್ ಅವರು, ಬೆಂಗಳೂರಿನಲ್ಲಿ ಡಿಕೇಶಿ ಅವರನ್ನು ಭೇಟಿ ಮಾಡಿರುವುದಕ್ಕೆ ನಾನಾ ರೀತಿಯ ತಪ್ಪು ಅರ್ಥ ಕಲ್ಪಿಸಿ, ರಾಜಕೀಯ ಬಣ್ಣ ಕಲ್ಪಿಸುವುದು ಸರಿಯಲ್ಲ, ಅದೊಂದು ಅಭಿವೃದ್ಧಿ ಕುರಿತು ಚೆರ್ಚಿಸಿದ ಭೇಟಿಯಾಗಿದೆ, ಇದು ಚುನಾವಣೆ ಸಮಯವಲ್ಲ, ಆಡಳಿತ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಗೆ ಅಭಿವೃದ್ಧಿ ಕುರಿತು ಚಿಂತಿಸುವುದು ಸಾಮಾನ್ಯ, ಡಿಕೇಶಿ ಅವರ ಭೇಟಿಯನ್ನೇ ನಾನಾ ರೀತಿಯ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಸಚಿವ ಆನಂದ್ ಸಿಂಗ್ ಅವರ ಶ್ರಮವಿದೆ. ಅಭಿವೃದ್ಧಿ ಮುಂದಿಟ್ಟುಕೊಂಡು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ, ಮತ್ತೆ ಗೆದ್ದು ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅವರೊಂದಿಗೆ ಸಾಕಷ್ಟು ಜನ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದಾರೆ, ಸರ್ಕಾರ ಬರುವಲ್ಲಿ ಅವರೆಲ್ಲರ ಶ್ರಮವಿದೆ ಎಂದರು. ಅಖಂಡ ಜಿಲ್ಲೆ ಅಭಿವೃದ್ಧಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಮುಂಬರುವ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ಆನಂದ್ ಸಿಂಗ್ ಸೇರಿ ನಮ್ಮ ಮೇಲಿದೆ, ಹೀಗಿರುವಾಗ ಡಿಕೇಶಿ ಭೇಡಿಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುವುದು, ಬಣ್ಣ ಬಳಿಯುವುದು ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ಕಾರ್ಕಲತೋಟ ಪಾಲನ್ನ, ತಿಮ್ಮಪ್ಪ, ವೀರಶೇಖರ್ ರೆಡ್ಡಿ, ಕೃಷ್ಣಾ ರೆಡ್ಡಿ ಸೇರಿದಂತೆ ಇತರರಿದ್ದರು.