ಹೊಸದಿಗಂತ ವರದಿ, ಉಡುಪಿ:
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯವರು, ಇದು ತನ್ನ ಕೊನೆಯ ಚುನಾವಣೆ ಎಂದು ಹೇಳುತ್ತಿದ್ದಾರೆ. ಕೊನೆಯ ಚುನಾವಣೆ ಎಂದು ಹೇಳುವವರನ್ನು ಎಂದಿಗೂ ನಂಬಬೇಡಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತದಾರರಿಗೆ ಕರೆ ನೀಡಿದರು.
ಅವರು ಉಡುಪಿಯ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನ ನಡೆಯುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು
ಸೊರಕೆಯವರು ಸತ್ಯ ಅಥವಾ ಸುಳ್ಳು ಹೇಳುತ್ತಿದ್ದರೂ, ಮತದಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಸತ್ಯ ಎಂದಾದರೇ ಅದೃಶವಶಾತ್ ಅವರು ಗೆದ್ದರೇ, ಜನರ ಸೇವೆ ಮಾಡದೇ ಅವರ ಹೆಂಡತಿ ಮಕ್ಕಳ ಹೊಟ್ಟೆಯನ್ನು ತುಂಬಿಸುತ್ತಾ ಕಾಲ ಕಳೆಯುತ್ತಾರೆ. ಸುಳ್ಳು ಎಂದಾದಲ್ಲಿ ಜನರಿಗೆ ಮೋಸ ಮಾಡಿದಂತಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2014 ರಲ್ಲಿ ವಿಧಾನಸಭೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. ಆ ನಂತರ 2018 ರಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಈಗ ಮತ್ತೇ ಎರಡು ಕ್ಷೇತ್ರಕ್ಕೆ ಟಿಕೆಟ್ ಕೇಳಿದ ಅವರಿಗೆ ಒಂದು ಕ್ಷೇತ್ರದಲ್ಲಿ ಮಾತ್ರ ಪಕ್ಷ ಟಿಕೆಟ್ ನೀಡಿದೆ. ಮಾಜಿ ಪ್ರಧಾನಿ ದೇವೆಗೌಡರು ಕಳೆದ 30 ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಾ, ಇಂದಿಗೂ ಸ್ಪರ್ಧಿಸುವುದನ್ನು ಕೊನೆಗೊಳಿಸಿಲ್ಲ ಎಂದು ವ್ಯಂಗಿಸಿದರು.
ಹಿಂದುತ್ವಕ್ಕೆ ವಿರೋಧಿಯಾಗಿರುವ ಕಾಂಗ್ರೆಸ್ ಪಕ್ಷ. ಅದರ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದರೇ ಸನಾತನ ಧರ್ಮವನ್ನು ಅನುಷ್ಠಾನಕ್ಕೆ ತರುತ್ತಾರೆ. ಇದು ಅನುಷ್ಠಾನಕ್ಕೆ ಬರಲೂ ಬಿಡಬಾರದು ಎಂದು ಕರೆ ನೀಡಿದ್ದರು. ಜಗತ್ತು ಗೌರವಿಸುವ ಸನಾತನ ಧರ್ಮದ ವಿರೋಧಿಯಾಗಿರುವ ಇವರುಗಳು, ಕೇವಲ ಹಿಂದುತ್ವದ ವಿರೋಧಿಗಳಲ್ಲ, ಬದಲಾಗಿ ಹಿಂದುಗಳ ವಿರೋಧಿಗಳು ಎಂದವರು ಹೇಳಿದರು.
2024 ರಲ್ಲಿ ನರೇಂದ್ರ ಮೋದಿಯವರ ಸರಕಾರವು ಅಧಿಕಾರಕ್ಕೆ ಬರಬೇಕೆಂದರೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬರಬೇಕು. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ಇದು ಮುನ್ನುಡಿಯಾಗಲಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿಗಳನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿ ಎಂದವರು ಹೇಳಿದರು.