ಹೊಸದಿಗಂತ ಡಿಜಿಟಲ ಡೆಸ್ಕ್:
ಕಲಾತಪಸ್ವಿ ಕೆ.ವಿಶ್ವನಾಥ್ ನಿಧನದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಸಾವಿನ ಸುದ್ದಿ ಸಿನಿ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದೆ. ಹಿರಿಯ ಚಲನಚಿತ್ರ ಗಾಯಕಿ ವಾಣಿ ಜಯರಾಮ್ ನಿನ್ನೆ (ಫೆಬ್ರವರಿ 4) ನಿಧನರಾದರು. ಆಕೆಯ ಸಾವಿನ ಸುದ್ದಿ ಚಿತ್ರರಂಗದಲ್ಲಿ ದುಃಖದ ಛಾಯೆ ಮೂಡಿಸಿದೆ. ನಿನ್ನೆ ಚನ್ನೈನ ಮನೆಯಲ್ಲಿ ಕೆಳಗೆ ಬಿದ್ದಿದ್ದ ಅವರ ಮೃತದೇಹ ಕಂಡು ಸಾವಿನ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಬೆಳಗ್ಗೆ ಕೆಲಸದಾಕೆ ಬಂದು ಕಾಲಿಂಗ್ ಬೆಲ್ ಮಾಡಿದರೂ ಬಾಗಿಲು ತೆಗೆಯದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲೂ ಆಕೆಯ ಹಣೆ ಮತ್ತು ಮುಖದ ಮೇಲೆ ಗಾಯಗಳಿರುವುದು ದೃಢಪಟ್ಟಿದೆ. ಇದರೊಂದಿಗೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಆಕೆಯ ಮನೆಯನ್ನು ವಶಪಡಿಸಿಕೊಂಡಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರನ್ನು ಮನೆಗೆ ಕಳುಹಿಸಿದ್ದಾರೆ. ಕೊಲೆಯ ತನಿಖೆ ನಡೆಸುತ್ತಿರುವ ಪೊಲೀಸರು ಎಲ್ಲಾ ವಿವರಗಳನ್ನು ಕಲೆಹಾಕುತ್ತಿದ್ದಾರೆ. ವಾಣಿ ಜಯರಾಂ ಅವರ ಸಂಪೂರ್ಣ ಮರಣೋತ್ತರ ಪರೀಕ್ಷೆ ವರದಿ ಬಂದರೂ ಸಾವಿಗೆ ಕಾರಣ ಹೇಳಲು ಸಾಧ್ಯವಿಲ್ಲ ಎಂದು ವಿಧಿವಿಜ್ಞಾನ ತಜ್ಞರು ಕೂಡ ಹೇಳಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಆಕೆಗೆ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು. ಆಕೆಯ ಸಾವಿನ ಸುದ್ದಿ ಇದೀಗ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.