ಹೊಸದಿಗಂತ ಡಿಜಿಟಲ್ ಡೆಸ್ಕ್ :
ವರದಕ್ಷಿಣೆಗಾಗಿ ಕಿರುಕುಳ ನೀಡಿದ ಆರೋಪದಡಿ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಎಸ್.ಆಕಾಶ್ ಹಾಗೂ ಅವರ ಕುಟುಂಬಸ್ಥರ ವಿರುದ್ದ ದೂರು ದಾಖಲಾಗಿದೆ.
ಆಕಾಶ್ ಅವರ ಪತ್ನಿ ಡಾ. ವಂದನ ನೀಡಿದ ದೂರಿನ ಮೇರೆಗೆ ಆಕಾಶ್ ಸೇರಿದಂತೆ ಅವರ ತಂದೆ ಶಂಕರ್, ತಾಯಿ ಚಂದ್ರಿಕಾ, ಸಹೋದರ ವಿಕಾಸ್ ವಿರುದ್ದ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ನಿವೃತ್ತ ಡಿಐಜಿ ಸುರೇಶ್ ಅವರ ಪುತ್ರಿಯಾಗಿರುವ ಡಾ.ವಂದನಾ ಹಾಗೂ ಐಎಎಸ್ ಅಧಿಕಾರಿ ಆಗಿದ್ದ ಡಾ. ಆಕಾಶ್ ಅವರು ಪರಸ್ಪರ ಒಪ್ಪಿಕೊಂಡು ಅದ್ಧೂರಿಯಾಗಿ ವಿವಾಹ ಆಗಿದ್ದರು. ಆದರೆ ಒಂದು ವರ್ಷ ಕಳೆಯುವಷ್ಟಲ್ಲಿಯೇ ಆಕಾಶ್ ಅವರ ಮನೆಯವರು ತೀವ್ರವಾಗಿ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಸ್ವತಃ ಆಕಾಶ್ ಅವರು ವರದಕ್ಷಿಣೆ ತರುವಂತೆ ಪೀಡಿಸಿದ್ದು, ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಪತ್ನಿ ವಂದನಾ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದೂರು ದಾಖಲಾದ ಬಳಿಕ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯ ಪೊಲೀಸರು ಸ್ಥಳ ಮಹಜರ್ ಮಾಡಿದ್ದಾರೆ. ಈ ಬಗ್ಗೆ ಪ್ರಾಥಮಿಕ ಹಂತದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದು, ಆರೋಪ ಸಾಬೀತಾದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ದೂರುದಾರ ಮಹಿಳೆ ವಂದನಾಗೆ ಪೊಲೀಸರು ಭರವಸೆ ನೀಡಿದ್ದಾರೆ.