ಹೊಸ ದಿಗಂತ ವರದಿ, ಮಂಗಳೂರು:
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯ ಸರಕಾರದಿಂದ ನೀಡಲ್ಪಡುವ ರಾಜ್ಯ ಮಟ್ಟದ ಪ್ರತಿಷ್ಠಿತ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ಗೆ ಹೊಸ ದಿಗಂತ ಮಂಗಳೂರು ಆವೃತ್ತಿಯ ವಿಶೇಷ ವರದಿಗಾರ ಗುರುವಪ್ಪ ಎನ್.ಟಿ. ಬಾಳೇಪುಣಿ ಅವರು ಆಯ್ಕೆಯಾಗಿದ್ದಾರೆ.
ಏ.14 ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿಯು 5 ಲಕ್ಷ ರೂ. ನಗದು, 20 ಗ್ರಾಂನ ಚಿನ್ನದ ಪದಕ ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ.
ಹೊಸ ದಿಗಂತ ಪತ್ರಿಕೆಯಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವಸುತ್ತಿರುವ ಬಾಳೇಪುಣಿ ಅವರು, ಪತ್ರಿಕೋದ್ಯಮದಲ್ಲಿ ಒಟ್ಟು 36 ವರ್ಷಗಳ ಅನುಭವ ಹೊಂದಿದ್ದಾರೆ. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಹೆಸರು ಗಳಿಸಿರುವ ಅವರು, ಹಲವಾರು ಮಂದಿ ಎಲೆಮರೆಕಾಯಿಯಂತಿದ್ದ ಸಾಧಕರನ್ನು ಹೊಸ ದಿಗಂತ ಮೂಲಕ ಬೆಳಕಿಗೆ ತಂದು ಅವರಿಗೆ ಪ್ರಶಸ್ತಿ ದೊರಕಲು ಕಾರಣರಾಗಿದ್ದಾರೆ. ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಹೊಸ ದಿಗಂತದ ಮೂಲಕ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ ಕೀರ್ತಿ ಬಾಳೇಪುಣಿ ಅವರಿಗೆ ಸಲ್ಲುತ್ತಿದೆ. ಬಾಳೇಪುಣಿ ಅವರಿಗೆ ಈ ಹಿಂದೆ 2011ರಲ್ಲಿ ರಾಷ್ಟ್ರಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ, 2004ರಲ್ಲಿ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, 2014ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಕಾಂತಾವರ ಪುರಸ್ಕಾರ ದೊರೆತಿದೆ.