ಡಾ.ರಾಜ್ ಕುಮಾರ್ ಕರುನಾಡಿನ ಮರೆಯಲಾಗದ ಮಾಣಿಕ್ಯ: ಡಾ.ನಂಜುಂಡೇಗೌಡ

ಹೊಸದಿಗಂತ ವರದಿ, ಮಡಿಕೇರಿ
ಡಾ.ರಾಜ್‍ಕುಮಾರ್ ಅವರು ತಮ್ಮ ಸರಳತೆ, ಕಲಾಪ್ರತಿಭೆ ಮತ್ತು ಜೀವನ ಶೈಲಿಯಿಂದ ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನಕ್ಕೆ ಬೆಳೆದರು ಎಂದು ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ವಾರ್ತಾಭವನದಲ್ಲಿ ಸರಳವಾಗಿ ನಡೆದ ಡಾ.ರಾಜ್‍ಕುಮಾರ್ ಅವರ 94ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
1959 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಡಾ.ರಾಜ್‍ಕುಮಾರ್ ಕನ್ನಡ ಚಲನಚಿತ್ರ ರಂಗದಲ್ಲಿ ಸಾರ್ವಕಾಲಿಕ ಶ್ರೇಷ್ಠ ನಟ. ಚಲನಚಿತ್ರ ರಂಗದಲ್ಲಿ ಉತ್ತುಂಗಕ್ಕೆ ಏರಿದರೂ ಸಹ ಸರಳ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿದ್ದರು. ಸಾಮಾಜಿಕ ಸಂದೇಶಗಳನ್ನು ನೀಡುವ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಡಾ.ರಾಜ್‍ಕುಮಾರ್ ಅವರಿಗೆ ಸಲ್ಲುತ್ತದೆ ಎಂದರು.
ಮುತ್ತುರಾಜ್ ಆಗಿ ಚಾಮರಾಜನಗರ ಜಿಲ್ಲೆಯ ಸಿಂಗನಲ್ಲೂರಿನಲ್ಲಿ 1929 ರಲ್ಲಿ ಜನಿಸಿ, ಚಲನಚಿತ್ರ ರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದರು. ಅವರು ಕರುನಾಡಿನ ಮರೆಯಲಾಗದ ಮಾಣಿಕ್ಯ. ತಮ್ಮ ವ್ಯಕ್ತಿತ್ವ ಕಲಾ ಪ್ರತಿಭೆಯಿಂದ ಡಾ.ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೇರಿದರು ಎಂದು ಅವರು ಹೇಳಿದರು.
ಡಾ.ರಾಜ್ ಕುಮಾರ್ ಅವರು ಪೌರಾಣಿಕ, ಸಾಮಾಜಿಕ, ಹಾಡುಗಾರಿಕೆ ಹೀಗೆ ಚಿತ್ರರಂಗದ ವಿವಿಧ ಕೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಎಲ್ಲರಿಗೂ ಆದರ್ಶ ಪ್ರಾಯರಾಗಿ 200 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ ಹೀಗೆ ಹತ್ತು ಹಲವು ಪ್ರಶಸ್ತಿಗಳು ಡಾ.ರಾಜ್‍ಕುಮಾರ್ ಅವರಿಗೆ ಹುಡುಕಿ ಬಂದವು ಎಂದು ತಿಳಿಸಿದರು.
ನಾಡು-ನುಡಿ ವಿಷಯದಲ್ಲಿ ಸದಾ ಮುಂದಿರುತ್ತಿದ್ದ ಡಾ.ರಾಜ್‍ಕುಮಾರ್ ಅವರು ಗೋಕಾಕ್ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿ, ಸರ್ಕಾರಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಅಂಗೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದರು.
ಡಾ.ರಾಜ್‍ಕುಮಾರ್ ಬೇಡರ ಕಣ್ಣಪ್ಪ, ಭಕ್ತ ಕನಕದಾಸ, ರಣಧೀರ ಕಂಠೀರವ, ಸತ್ಯ ಹರಿಶ್ಚಂದ್ರ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣ ದೇವರಾಯ, ಭಕ್ತ ಕುಂಬಾರ, ಮಯೂರ, ಬಬ್ರುವಾಹನ, ಭಕ್ತ ಪ್ರಹ್ಲಾದ ಹೀಗೆ ಹಲವು ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸಿನಲ್ಲಿ ಸದಾ ಇದ್ದಾರೆ ಎಂದು ವರ್ಣಿಸಿದರು.
ಡಾ.ರಾಜ್‍ಕುಮಾರ್ ಅವರು ಗಾಯಕರಾಗಿ, ಯಾರೇ ಕೂಗಾಡಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಹೇ.. ದಿನಕರ, ಹೃದಯ ಸಮುದ್ರ, ನಾದಮಯ ಹೀಗೆ ಹಲವು ಹಾಡುಗಳನ್ನು ಹಾಡಿ ರಾಷ್ಟ್ರೀಯ ಸಿನೆಮಾ ಪ್ರಶಸ್ತಿ ಪಡೆದಿದ್ದಾರೆ ಎಂದರು.
ಕನ್ನಡ ನಾಡು ನುಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಡಾ.ರಾಜ್ ಕುಮಾರ್ ಅವರು, ನಾಡಿನಲ್ಲಿ ಅಣ್ಣಾವ್ರು, ರಾಜಣ್ಣ ಎಂದು ಮನೆ ಮಾತಾಗಿದ್ದಾರೆ. ನಟ ಸಾರ್ವಭೌಮ, ಬಂಗಾರದ ಮನುಷ್ಯ, ವರನಟ ಎಂಬ ಬಿರುದನ್ನು ಪಡೆದಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ನುಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!