ಹೊಸದಿಗಂತ ವರದಿ ಮಡಿಕೇರಿ:
ಹಾಸನ ಆಯ್ತು ಕೊಡಗು ಜಿಲ್ಲೆಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕಂಪನದ ಅನುಭವವಾಗಿದ್ದರೆ, ಕೊಡಗಿನ ಗಡಿ ಭಾಗದ ಕೊಡ್ಲಿಪೇಟೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಕಂಪನ ಅನುಭವಕ್ಕೆ ಬಂದಿರುವುದಾಗಿ ಹೇಳಲಾಗಿದೆ.
ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಮತ್ತು ನೇಗಳ್ಳೆ ಗ್ರಾಮದ ಜನತೆಗೂ ಭೂಕಂಪನದ ಅನುಭವವಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರದಿಂದ 16 ಕಿಲೋ ಮೀಟರ್ ದಕ್ಷಿಣಕ್ಕೆ ಕಂಪನದ ಕೇಂದ್ರ ಬಿಂದು ಕಂಡು ಬಂದಿದ್ದು, ಮುಂಜಾನೆ 4:37ರ ಗಂಟೆಗೆ ರಿಕ್ಟರ್ ಮಾಪಕದಲ್ಲಿ 3.4 ಮ್ಯಾಗ್ನಿಟ್ಯೂಡ್ನಲ್ಲಿ ಭೂಕಂಪನ ದಾಖಲಾಗಿದೆ.
ಹೀಗಾಗಿ ಹಾಸನ ಸೇರಿದಂತೆ ಹಾಸನಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಭೂ ಕಂಪನದ ಅನುಭವವಾಗಿರುವುದಾಗಿ ಭೂ ವಿಜ್ಞಾನ ಇಲಾಖೆಯ ಮೂಲಗಳು ಹೇಳಿವೆ. ವೈಜ್ಞಾನಿಕ ಸಂಬಂಧ ಇಲ್ಲದಿದ್ದರೂ ಗುರುವಾರದ ಕಂಪನದ ಅನುಭವದಿಂದ ಮತ್ತದೇ ಆತಂಕ ಸೃಷ್ಟಿಯಾಗಿದೆ.