ಹೊಸದಿಗಂತ ವರದಿ, ಮೈಸೂರು:
ಎಜುಕೇಶನ್ ಪಾಲಿಸಿ ಬಿಜೆಪಿ ಸರ್ಕಾರ ಮಾಡಿರೋದಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಿನಿಂದಲೂ ಇದೆ. ಇದರಲ್ಲಿ ಅನಾವಶ್ಯಕ ರಾಜಕಾರಣ ಮಾಡಬಾರದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ಧರಿಸಿ ಶಾಲಾ-ಕಾಲೇಜ್ಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶವಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಸಮವಸ್ತ್ರವಿಲ್ಲದೆ ಶಾಲೆ-ಕಾಲೇಜ್ಗಳಿಗೆ ಪ್ರವೇಶ ಇಲ್ಲ. ಸಮವಸ್ತç ಆದೇಶವನ್ನ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಪಾಲನೆ ಮಾಡದಿದ್ದರೆ ಸರ್ಕಾರಿ ನಿಯಮದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯಾವುದೇ ಹೆಣ್ಣುಮಕ್ಕಳಿಗೆ ಶಿಕ್ಷಣ ವಂಚಿತ ಮಾಡುವ ದುರುದ್ದೇಶ ಇಲ್ಲ. ಎಜುಕೇಷನ್ ಅಕ್ಟ್ ರೂಲ್ 11 ಅನ್ವಯ ನಿಯಮ ಜಾರಿ ಮಾಡಿದ್ದೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದ್ದ ನಿಯಮಗಳೇ ಈಗಲೂ ಜಾರಿಯಲ್ಲಿವೆ. ಆ ನಿಯಮದ ಅನ್ವಯವೇ ಆದೇಶ ಮಾಡಿದ್ದೇನೆ. ರಾಜಕೀಯ ಲಾಭಕ್ಕೆ ಮಕ್ಕಳನ್ನ ಬಳಸಿಕೊಳ್ಳಬಾರದು. ಮಕ್ಕಳನ್ನು ಅಸ್ತ್ರ ಮಾಡಿಕೊಂಡು ರಾಜಕೀಯ ಮಾಡಬೇಡಿ ಎಂದು ಕಿಡಿಕಾರಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಆಗ್ತಿದೆ, ಆದರೆ ಪಕ್ಷದಲ್ಲಿ ಚರ್ಚೆ ಆಗಿಲ್ಲ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಹೈಕಮಾಂಡ್ ಸೂಕ್ತವಾದ ನಿರ್ಣಯ ಕೈಗೊಳ್ಳುತ್ತೆ.
ರಾಜ್ಯ ಬಜೆಟ್ ಹಿನ್ನಲೆ ಕೇಂದ್ರ ನಾಯಕರ ಸಲಹೆ ಪಡೆಯಲು ಸಿಎಂ ದೆಹಲಿಗೆ ಹೋಗಿದ್ದಾರೆ. ಪ್ರತಿ ಬಜೆಟ್ಗು ಮುನ್ನ ಹೈಕಮಾಂಡ್ ಹಾಗೂ ಕೇಂದ್ರ ಸಚಿವರು, ಸಂಸದರ ಜೊತೆ ಮಾತುಕತೆ ನಡೆಸುವುದು ಸಹಜ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.