ಈ ಬಾರಿಯ ಬಜೆಟ್​​ನಲ್ಲಿ ನಾಲ್ಕು ಸಂಗತಿಗಳಿಗೆ ಒತ್ತು: ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಬಜೆಟ್​ ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)​ ಮಾಹಿತಿ ನೀಡಿದರು.

ಈ ಸಲದ ಬಜೆಟ್​​ನಲ್ಲಿ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ ತೆರಿಗೆ ಪದ್ಧತಿಗೆ ಪ್ರೋತ್ಸಾಹ ನೀಡಲಾಗಿದೆ. ಇದರಿಂದ ಜನಸಾಮಾನ್ಯರು ಸುಲಭವಾಗಿ ಹಳೇ ತೆರಿಗೆ ಪದ್ಧತಿಯಿಂದ ಹೊರಬಂದು, ಹೊಸ ಪದ್ಧತಿಗೆ ಹೊಂದಿಕೊಳ್ಳಬಹುದು ಎಂದು ಹೇಳಿದರು.

ಆದ್ರೆ ಇಲ್ಲಿ ಯಾರಿಗೂ ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಳ್ಳಿ ಎಂದು ಸರ್ಕಾರ ಒತ್ತಡ ಹೇರುವುದಿಲ್ಲ. ಹಳೇ ತೆರಿಗೆ ಪದ್ಧತಿಯಲ್ಲೇ ಮುಂದುವರಿಯುವವರು ಖಂಡಿತ ಅದನ್ನೇ ಅನುಸರಿಸಬಹುದು. ಆದರೆ ಹೊಸ ತೆರಿಗೆ ಪದ್ಧತಿ ಆಕರ್ಷಕವಾಗಿದೆ ಮತ್ತು ಸರಳವಾಗಿದೆ. ಸಣ್ಣ ಪ್ರಮಾಣದ ಸ್ಲ್ಯಾಬ್​​ಗಳನ್ನು ಒಳಗೊಂಡಿದ್ದು ತೆರಿಗಾದರರಿಗೆ ರಿಯಾಯಿತಿ ನೀಡುತ್ತದೆ ಎಂದೂ ಸೀತಾರಾಮನ್​ ಹೇಳಿದರು.

ಈ ಬಾರಿಯ ಬಜೆಟ್​​ನಲ್ಲಿ ಒಟ್ಟು ನಾಲ್ಕು ಸಂಗತಿಗಳಿಗೆ ಒತ್ತು ನೀಡಲಾಗಿದೆ. ಮಹಿಳಾ ಸಬಲೀಕರಣ, ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಿಯಾ ಯೋಜನೆ, ಸಾಂಪ್ರದಾಯಿಕ ಕುಶಲಕರ್ಮಿಗಳಿಗಾಗಿ (ವಿಶ್ವಕರ್ಮ ಸಮುದಾಯದವರು) ಉಪಕ್ರಮಗಳು ಮತ್ತು ಹಸಿರು ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ತಿಳಿಸಿದರು.

ಈ ಬಜೆಟ್​ ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ ದೊಡ್ಡಮಟ್ಟದ ಸುಧಾರಣೆಯಾಗಲು ಅನುಕೂಲ ಮಾಡಿಕೊಡುತ್ತದೆ. ದೇಶದ ಬೆಳವಣಿಗೆಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಎಂಜಿನ್​ಗಳಾಗಿದ್ದರಿಂದ ಅವುಗಳಿಗೆ ಹೆಚ್ಚು ಉತ್ತೇಜನ ಕೊಡಲಾಗಿದೆ. ಅಷ್ಟೇ ಅಲ್ಲ ಖಾಸಗಿ ವಲಯವನ್ನು ಬೂಸ್ಟ್ ಮಾಡುತ್ತದೆ ಎಂದು ಹೇಳಿದರು. ಸಿಪಿಐ (Consumer Price Index-ಗ್ರಾಹಕರ ಬೆಲೆ ಸೂಚ್ಯಂಕ) ಮತ್ತು ಡಬ್ಲ್ಯೂಪಿಐ (Wholesale Price Index-ಸಗಟು ಬೆಲೆ ಸೂಚ್ಯಂಕ) ಎರಡೂ ಕಡೆಗಳಲ್ಲಿ ಹಣದುಬ್ಬರ ಕಡಿಮೆ ಆಗಿರುವುದನ್ನು ನೀವು ನೋಡಿರಬಹುದು. ಹಣದುಬ್ಬರ ಇಳಿಕೆಗಾಗಿ ನಮ್ಮ ಸರ್ಕಾರವು ಕ್ರಮ ಕೈಗೊಂಡಿದೆ. 5 ಟ್ರಿಲಿಯನ್​ ಡಾಲರ್ ಆರ್ಥಿಕತೆಯನ್ನು ನಾವು ಸಾಗುತ್ತಿದ್ದೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!