ಹೊಸದಿಗಂತ ವರದಿ ಕಲಬುರಗಿ :
ಮೆಗಾ ಟೆಕ್ಸ್ ಟೈಲ್ ಪಾರ್ಕ್ 371 (ಜೆ) ಜಾರಿ ಆದ ಮೇಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಅತಿ ದೊಡ್ಡ ಯೋಜನೆಯಾಗಿದೆ. ಇದು ಈ ಭಾಗದ ಆರ್ಥಿಕ ಪ್ರಗತಿಗೆ ದೊಡ್ಡ ಶಕ್ತಿ ತುಂಬುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪಾರ್ಕ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವಾರು ಉದ್ಯೋಗವಕಾಶಗಳನ್ನು ಸೃಷ್ಟಿಸುವ ಜೊತೆ ಜೊತೆಗೆ ಆತ್ಮನಿರ್ಭರತೆಯ ಭಾರತಕ್ಕೆ ಪೂರಕವಾಗಲಿದ್ದು,ಕನಾ೯ಟಕದ ಜವಳಿ ಕ್ಷೇತ್ರದಲ್ಲಿ ನೂತನ ಕ್ರಾಂತಿಯಾಗಿದೆ ಎಂದು ಹೇಳಿದರು.
ಯಡಿಯೂರಪ್ಪ ಮನೆ ಮೇಲೆ ಕಲ್ಲು ಹೊಡೆದಿದ್ದು ಬಿಜೆಪಿ ಕುತಂತ್ರ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಕಾಂಗ್ರೆಸ್ ಕುತಂತ್ರವಾಗಿದೆ. ಅಲ್ಲಿ ಸಿಕ್ಕಿರುವ ನಾಯಕರು ಕಾಂಗ್ರೆಸ್ನವರು. ಕಾಂಗ್ರೆಸ್ ಅವರನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂದ ಅವರು,
ರಾತ್ರಿ ಮೀಟಿಂಗ್ ಮಾಡಿ ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಸುಳ್ಳು ಹೇಳೋದನ್ನು ಬಿಡಬೇಕು ಎಂದು ಕುಟುಕಿದರು.
ರಾಜ್ಯ ವಿಧಾನ ಸಭಾ ಚುನಾವಣೆಗಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡದ ಸಿಎಂ, ಕಾಂಗ್ರೆಸ್ ಗೆ ಹೊಟ್ಟೆಕಿಚ್ಚು, ಅವರು ಮಾಡದೇ ಇರೋದನ್ನು ನಾವು ಮಾಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ನಿಂದ ವಲಸೆ ಹೋದವರು ಮತ್ತೆ ಕಾಂಗ್ರೆಸ್ ಬರುತ್ತಾರೆ ಎಂಬ ಚೆಲುವನಾರಾಯಣ ಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಚೆಲುವನಾರಾಯಣ ಸ್ವಾಮಿಯೇ ಒಬ್ಬ ವಲಸೆ ಹೋದ ವ್ಯಕ್ತಿ, ಆತನ ಮಾತು ನಂಬುವುದಕ್ಕೆ ಆಗುತ್ತದೆಯಾ ಎಂದು ಪ್ರಶ್ನಿಸಿದರು.