ಹೊಸದಿಗಂತ ವರದಿ,ಕಲಬುರಗಿ:
ಶ್ರೀರಾಮ ಸೇನಾ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿ ಸೇಡು ತೀರಿಸಿಕೊಳ್ಳುವ ಹಾಗೂ ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾದ ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್ಐ ಸಂಗಮೇಶ ಅಂಗಡಿ ಹಾಗೂ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಬಿ. ಶಿವಪ್ರಸಾದ ಮಠ ಅವರನ್ನು ಅಮಾನತುಗೊಳಿಸಬೇಕು ಎಂದು ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಹಾಗೂ ಆಂದೋಲಾದ ಕರುಣೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನಾ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಜೇವರ್ಗಿ ಪೊಲೀಸರು ದೌರ್ಜನ್ಯ, ಶೋಷಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ತಾಲೂಕಿನ ಯಾವುದೇ ಹೋರಾಟಗಾರರು ಪೊಲೀಸರಿಗೆ ಪ್ರಶ್ನಿಸಿದರೆ ಜೈಲಿಗೆ ಕಳುಹಿಸಿ ಮಾನಸಿಕ, ದೈಹಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ದೂರಿದರು.
ಪೊಲೀಸ್ ಇಲಾಖೆಯ ಘನತೆ, ಗೌರವ ಕಾಪಾಡದೆ ಕರ್ತವ್ಯ ಮರೆತು ಖಾಕಿಗೆ ಅವಮಾನಿಸುತ್ತಿದ್ದಾರೆ. ಕಳೆದ ತಿಂಗಳಲ್ಲಿ ಓವರ್ ಲೋಡ್ ಮರಳು ಸಾಗಿಸುವ ವಾಹನವನ್ನು ಹಿಡಿದು ನಿಲ್ಲಿಸದೆ ನಿರ್ಲಕ್ಷ್ಯವಹಿಸಿದ ಆರ್ಟಿಓ ವಿರುದ್ಧ ಹೋರಾಟ ಮಾಡಿದ್ದಕ್ಕಾಗಿ ಶರಣಪ್ಪ ರಡ್ಡಿ ವಿರುದ್ದ ಆರ್ಟಿಓ ಅವರನ್ನು ಎತ್ತಿಕಟ್ಟಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದರು.
ಪುರಸಭೆ ನೌಕರ ರಾಜಶೇಖರ ಹಿರೇಮಠ, ಸಿಬ್ಬಂದಿ ಜತೆಗೂಡಿ ಮಾಂಸದ ಅಂಗಡಿ ತೆರವುಗೊಳಿಸಲು ಹೋದಾಗ ಆರು ಜನ ಮುಸ್ಲಿಂರು ಸೇರಿ ಮಾಂಸ ಕತ್ತರಿಸುವ ಚೂರಿಯಿಂದ ಹಲ್ಲೆಗೆ ಯತ್ನಿಸಿದ್ದರು. ಆರು ಜನರ ಮೇಲೆ ದೂರು ದಾಖಲಾಗಿತ್ತು. ಪ್ರಮುಖ ಆರೋಪಿ ಅಬ್ದುಲ್ ವಾಹಿದ್ ಗಿರಣಿ ಬಂಧಿಸಿಲ್ಲ ಎಂದು ಆರೋಪಿಸಿದರು.
ಶ್ರೀರಾಮ ಸೇನಾ ಪ್ರಮುಖರಾದ ನಿಂಗಣ್ಣಗೌಡ ಮಾಲಿಪಾಟೀಲ್, ಮಲ್ಲಣಗೌಡ ಪಾಟೀಲ್, ಅರುಣ ಸುಲ್ತಾನಪುರ, ಮಹೇಶ ಗೊಬ್ಬೂರ್, ಸಿದ್ದು ಪಾಟೀಲ್, ಸಂತೋಷ ಹಿರೇಮಠ, ಸಂತೋಷ ಬೆನಕನಹಳ್ಳಿ ಇದ್ದರು.