ಹೊಸದಿಗಂತ ವರದಿ, ದಾಂಡೇಲಿ:
ಗಾಂಧಿನಗರದಲ್ಲಿ ಪತ್ತೆಯಾಗಿದ್ದ ರಾಶಿ ರಾಶಿ ನಕಲಿ ನೋಟ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಅರ್ಷದ್ ಅಜುಂ ಖಾನ್ (ವ: 36) ಈತನನ್ನು ನಗರ ಠಾಣೆಯ ಪೊಲೀಸರು ಉತ್ತರ ಪ್ರದೇಶದ ಲಕ್ನೋದಲ್ಲಿ ಬಂಧಿಸಿ ಕರೆ ತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ
ಗಾಂಧಿನಗರದ ಮನೆಯೊಂದರಲ್ಲಿ 14 ಕೋಟಿ ರೂಪಾಯಿಗೂ ಹೆಚ್ಚಿನ ಪ್ರಮಾಣದಲ್ಲಿ ರೂ.500/- ಮುಖ ಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದವು. ಆದರೆ ಆರೋಪಿ ಅರ್ಷದ್ ಅಜುಂ ಖಾನ್ ಮಾತ್ರ ತಲೆಮರೆಸಿಕೊಂಡಿದ್ದನು.
ದಾಂಡೇಲಿ ತನಿಖಾ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಹಳಿಯಾಳ ತನಿಖಾ ವಿಭಾಗದ ಪಿಎಸ್ಐ ಕೃಷ್ಣ ಅರಕೇರಿ ಹಾಗೂ ಸಿಬ್ಬಂದಿಗಳು ಈತನ ಬಂಧನಕ್ಕೆ ಬಲೆ ಬೀಸಿದ್ದರು. ಮೊಬೈಲ್ ಟವರ್ ಲೋಕೇಶನ್ ಹಾಗೂ ಆತನ ಹಿಂದಿನ ಇನ್ನಿತರೆ ವ್ಯವಹಾರದ ಆಧಾರದಲ್ಲಿ ಪೊಲೀಸ್ ಅಧಿಕಾರಿಗಳು ಉತ್ತರ ಪ್ರದೇಶದ ಲಕ್ನೋದವರೆಗೆ ತೆರಳಿ ಆತನ ಹುಡುಕಾಟ ನಡೆಸಿದ್ದರು. ಪೊಲೀಸರ ಆಗಮನದ ಸುಳಿವು ಪಡೆದಿದ್ದ ಆರೋಪಿ ಅರ್ಷದ್ ಖಾನ್ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಪೊಲೀಸರು ತಮ್ಮ ಖೆಡ್ಡಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆತನನ್ನು ದಾಂಡೇಲಿಯ ನ್ಯಾಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈತ ಇಷ್ಟೊಂದು ಪ್ರಮಾಣದಲ್ಲಿ ನಕಲಿ ನೋಟುಗಳನ್ನು ದಾಸ್ತಾನು ಇಟ್ಟಿದ್ದಾದರೂ ಯಾಕೆ ?. ಇದರ ಹಿಂದಿರುವ ಉದ್ದೇಶವೇನು?. ಇದರಲ್ಲಿ ಇನ್ನಿತರರ ಕೈವಾಡವಿದೆಯೇ?, ದಾಂಡೇಲಿಗೆ ಬಂದು ಬಾಡಿಗೆ ಮನೆಯಲ್ಲಿ ಉಳಿದುಕೊಂಡಿರುವುದರ ಉದ್ದೇಶವೇನು?. ಈ ನಕಲಿ ನೋಟುಗಳನ್ನು ಹೇಗೆ, ಯಾಕೆ, ಎಲ್ಲಿ ಬಳಕೆ ಮಾಡಲಾಗಿರಬಹುದೆ?, ಅಥವಾ ಮುಂದೆ ಎಲ್ಲಿಯಾದರೂ ಬಳಕೆ ಮಾಡುವ ಸಾಧ್ಯತೆಗಾಗಿ ದಾಸ್ತಾನು ಇಟ್ಟಿರಬಹುದೇ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿರುವ ಅನುಮಾನಗಳ ಬಗ್ಗೆ ಪೊಲೀಸರ ತನಿಖೆಯಿಂದ ಸತ್ಯ ಸತ್ಯತೆ ತಿಳಿದು ಬರಬೇಕಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್, ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಜೈಪಾಲ್ ಪಾಟೀಲ್ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಅಮೀನ್ ಅತ್ತಾರ , ಕಿರಣ್ ಪಾಟೀಲ್ ಹಾಗೂ ಕೃಷ್ಣ ಅರಕೇರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಬಾಗವಹಿಸಿದ್ದರು.