ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಆಗಮಿಸಿದ್ದ ರಾಕೇಶ್ ಟಿಕಾಯತ್ ಮತ್ತು ಯುಧ್ವೀರ್ ಸಿಂಗ್ ಮೇಲೆ ಕೆಲವರು ಮಸಿ ಎರಚಿ ದಾಂದಲೆ ಸೃಷ್ಟಿಸಿದ್ದಾರೆ. ರೈತರ ಪ್ರಗತಿಗೆ ಪೂರಕ ಎಂದು ವ್ಯಾಖ್ಯಾನಿಸಲಾಗಿದ್ದ ಕೇಂದ್ರದ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಈ ಹಿಂದೆ ಟಿಕಾಯತ್ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದವು ಎಂಬುದಿಲ್ಲಿ ಗಮನಾರ್ಹ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ರೈತ ಚಳವಳಿ ಬಗ್ಗೆ ಆತ್ಮಾವಲೋಕನದ ಸ್ಪಷ್ಟೀಕರಣ ಸಭೆಯಲ್ಲೇ ಘಟನೆ ನಡೆದಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾಕೇಶ್ ಟಿಕಾಯತ್ ಮತ್ತು ಯುಧವೀರ್, ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ರಾಜ್ಯದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಕೆಲವರು ವಾಗ್ವಾದಕ್ಕಿಳಿದಿದ್ದು, ಕಪ್ಪು ಮಸಿ ಎರಚಿದ್ದಲ್ಲದೆ. ಕುರ್ಚಿಗಳನ್ನು ಮನಬಂದಂತೆ ಎಸೆದ ಘಟನೆಯೂ ನಡೆಯಿತು.
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಳಿಬರುತ್ತಿರುವ ಆರೋಪ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಲು ರಾಷ್ಟ್ರೀಯ ನಾಯಕರು ಬಂದಿದ್ದರು. ಈ ವೇಳೆ ಏಕಾಏಕಿ 3 ಜನ ಧಾವಿಸಿ ಮಸಿ ಎರಚಿ ಹಲ್ಲೆಗೆ ಮುಂದಾದರು. ಅವರು ಯಾರೆಂಬ ಬಗ್ಗೆ ಮಾಹಿತಿ ಇಲ್ಲ, ಮಸಿ ಬಳಿಯುವ ವೇಳೆ ಅವರು ಏನನ್ನೂ ಮಾತನಾಡಿಲ್ಲ. ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೊಂದೆಡೆ, ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ಬಗೆಯ ಚರ್ಚೆಯೂ ನಡೆದಿದ್ದು, ಇತ್ತೀಚೆಗೆ ಸುದ್ದಿಯಿಂದ ನೇಪಥ್ಯಕ್ಕೆ ಸರಿದಿದ್ದ ಟಿಕಾಯತ್ ಪಂಗಡವು ಪ್ರಚಾರಕ್ಕೆಂದೇ ಈ ಗೊಂದಲ ಸೃಷ್ಟಿಸಿದೆಯೇ ಎಂಬ ಅನುಮಾನವನ್ನೂ ಸಾಮಾಜಿಕ ಜಾಲತಾಣ ಬಳಕೆದಾರರು ವ್ಯಕ್ತಪಡಿಸಿದ್ದಾರೆ.