ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪಂಜಾಬ್ನ ಬಟಿಂಡಾ ಸೇನಾ ನೆಲೆಯಲ್ಲಿ ಬುಧವಾರ ನಸುಕಿನ ವೇಳೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ದೇಶದ ನಾಲ್ವರು ಯೋಧರು ಹುತಾತ್ಮರಾಗಿದ್ದು, ಇದರಲ್ಲಿ ಕರ್ನಾಟಕದ ಇಬ್ಬರು ಯೋಧರು ಕೂಡ ಸೇರಿದ್ದಾರೆ.
ಕರ್ನಾಟಕದ ಸಾಗರ್ ಬಣ್ಣೆ (25), ಸಂತೋಷ್ ಎಂ. ನಾಗರಾಳ್ (25), ತಮಿಳುನಾಡಿನ ಕಮಲೇಶ್ ಆರ್. (24) ಯೋಗೇಶ್ ಕುಮಾರ್ ಜೆ. (24) ಮೃತಪಟ್ಟಿದ್ದಾರೆ.
ನಿನ್ನೆ ಬೆಳಗ್ಗೆ 4.35ರ ಸುಮಾರಿಗೆ ಠಾಣೆಯ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಇದೊಂದು ಆಂತರಿಕ ಘರ್ಷಣೆ ಎಂದು ತಿಳಿದು ಬಂದಿದೆ. ಈ ವೇಳೆ ನಾಲ್ವರು ಯೋಧರು ಮೃತಪಟ್ಟಿದ್ದಾರೆ. ಘಟನೆ ತಿಳಿದ ತಕ್ಷಣ ಕ್ಷಿಪ್ರ ಕಾರ್ಯಾಚರಣೆ ಸೇನಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಠಾಣೆಯ ಮೇಲೆ ದಾಳಿ ಮಾಡಿದವರ ಬಗ್ಗೆ ಪತ್ತೆ ಮಾಡಲಾಗುವುದು ಎಂದು ಸೌತ್ ವೆಸ್ಟರ್ನ್ ಕಮಾಂಡ್ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಘಟನೆಯಲ್ಲಿ ಹುತಾತ್ಮರಾದ ಯೋಧರ ಸಂಬಂಧಿಕರಿಗೆ ಅವರ ಸಾವಿನ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದೂ ಸೇನಾಧಿಕಾರಿಗಳು ತಿಳಿಸಿದ್ದಾರೆ. ಮೃತ ದೇಹಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಬಟಿಂಡಾ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ದುರದೃಷ್ಟಕರ ಘಟನೆಯಲ್ಲಿ ಫಿರಂಗಿ ದಳದ ನಾಲ್ವರು ಸೈನಿಕರು ಗುಂಡೇಟುಗಳಿಗೆ ಬಲಿಯಾಗಿದ್ದಾರೆ. ಘಟನೆಯಲ್ಲಿ ಬೇರೆ ಯಾವುದೇ ಸಿಬ್ಬಂದಿ ಗಾಯಗೊಂಡ ಅಥವಾ ಆಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ’ ಎಂದು ಸೇನೆಯ ನೈರುತ್ಯ ಕಮಾಂಡ್ ಪ್ರಕಟಣೆಯಲ್ಲಿ ಹೇಳಿದೆ.
ಘಟನೆ ಬೆನ್ನಲ್ಲೇ ಸ್ಥಳದಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ. ಈ ತಂಡಗಳು ಘಟನಾ ಸ್ಥಳವನ್ನು ಸುತ್ತುವರಿದಿವೆ. ಇಡೀ ಪ್ರದೇಶದ ಸುತ್ತ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.