ಹೊಸದಿಗಂತ ವರದಿ ಶಿರಸಿ:
ಅರಣ್ಯ ಅತಿಕ್ರಮಣಕ್ಕೆ ಸಂಬಂಧಿಸಿ ಅರಣ್ಯ ಸಿಬ್ಬಂದಿಯ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಿದ್ದಾಪುರ ತಾಲೂಕಿನ ಕಾನಸೂರಿನ ಬಿಳೆಗೋಡು ಗ್ರಾಮದಲ್ಲಿ ನಡೆದಿದೆ. ಅರಣ್ಯ ವನಪಾಲಕ ವಿ.ಟಿ. ತಿಮ್ಮಾ ನಾಯ್ಕ ಹಲ್ಲೆಹೊಳಗಾದ ಸಿಬ್ಬಂದಿಯಾಗಿದ್ದಾರೆ. ಈ ಘಟನೆಯಲ್ಲಿ ವನಪಾಲಕನ ಕೈಗೆ ಗಂಭೀರ ಗಾಯವಾಗಿದೆ. ವನಪಾಲಕನ ಮೇಲೆ ಹಲ್ಲೆ ಮಾಡಿದ ಬಿಳೆಗೋಡ ಗ್ರಾಮದ ಮಹಬಲೇಶ್ವರ ಚಂದು ಮರಾಠಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಇಂದು ಬೆಳಿಗ್ಗೆ ಅತಿಕ್ರಮಣ ವಿಚಾರಕ್ಕೆ ತನಿಖೆ ಮಾಡಲು ಸ್ಥಳಕ್ಕೆ ತೆರಳಿದ್ದ ಫಾರೆಸ್ಟರ್ ಹಾಗೂ ಅರಣ್ಯ ಅತಿಕ್ರಮದಾರರ ನಡುವೆ ಮಾತಿನ ಚಕಮುಕಿ ನಡೆದಿದ್ದು, ಏಕಾಏಕಿ ಸಿಟ್ಟಿಗೆದ್ದ ಮಹಾಬಲೇಶ್ವರ ಚಂದು ಮರಾಠಿ ಕತ್ತಿಯಿಂದ ಇಲಾಖೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಕೂಡಲೇ ಅದನ್ನ ಕಂಡ ವನಪಾಲಕ ವಿ.ಟಿ ನಾಯ್ಕ ತಡೆಯಲು ಹೋಗಿದ್ದು, ಆಗ ಕತ್ತಿ ಬೀಸಿದಾಗ ವನಕಾಲಕನಿಗೆ ಗಂಭೀರ ಗಾಯವಾಗಿದೆ. ಬಲ ಕೈನ ಎರಡು ಬೆರಳುಗಳು ಕಟ್ ಆಗಿದ್ದು, ಮೂಳೆಗೆ ಗಂಭೀರವಾಗಿ ಪೆಟ್ಟಾಗಿದೆ.
ಈ ಘಟನೆ ನಡೆದ ತಕ್ಷಣವೇ ಗಾಯಗೊಂಡ ವನಪಾಲಕನನ್ನು ಶಿರಸಿ ಟಿಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಾಥಮಿಕ ಪ್ರಾಥಮಿಕ ಚಿಕಿತ್ಸೆ ನೀಡಿದ ಟಿಎಸ್ಎಸ್ ಆಸ್ಪತ್ರೆ ವೈದ್ಯರು ಮಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲು ತಿಳಿಸಿದ್ದಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.