ಹೊಸದಿಗಂತ ವರದಿ ಹಾವೇರಿ:
2024ಕ್ಕೆ ದೇಶದಲ್ಲಿ ಸನಾತನ ಧರ್ಮದ ಅಡಿಯಲ್ಲಿನ ಸರ್ಕಾರ ದೇಶದಲ್ಲಿ ಆಡಳಿತಕ್ಕೆ ಬರಲಿದೆ, ಆದ ಕರ್ನಾಟಕದಲ್ಲಿ ಯುಪಿ ಮಾದರಿಯ ಸರ್ಕಾರ ಆಡಳಿತದಲ್ಲಿ ಇರಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ನೇತಾಜಿ ಸುಭಾಷ್ಚಂದ್ರ ಭೋಸ್ ವರ್ತುಲದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಾವೇರಿ ಕಾ ರಾಜಾ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮುನ್ನಾ ದಿನವಾದ ಬುಧವಾರ ಹಮ್ಮಿಕೊಂಡಿದ್ದ ಹಿಂದೂ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಇಂದು ನಮ್ಮ ದೇಶ 5ನೇ ಶಕ್ತಿಶಾಲಿ ರಾಷ್ಟ್ರವಾಗಿದೆ, ನಮ್ಮ ಸೇನೆ ವಿಶ್ವದ ೩ನೇ ಶಕ್ತಿಶಾಲಿ ಸೇನೆ ಎನಿಸಿಕೊಂಡಿದೆ. ಇದಕ್ಕೆ ಕಾರಣವಾಗಿದ್ದು ದೂರದೃಷ್ಠಿಯ ಪ್ರಧಾನಿ ನರೇಂದ್ರ ಮೋದಿ.
ಕರ್ನಾಟಕದಲ್ಲಿನ ಸರ್ಕಾರ ಕೂಡ ಬಹುದಿನ ಮುಂದುವರೆಯಲಾರದು, ಇಲ್ಲಿ ಕೂಡ ಉತ್ತರ ಪ್ರದೇಶ ಮಾದರಿ ಸರ್ಕಾರ ಬರಲಿದೆ, ನಾನೂ ಕೂಡ ಒಂದು ದಿನ ಈ ರಾಜ್ಯದ ಸಿಎಂ ಕುರ್ಚಿಗೆ ಬರುತ್ತೇನೆ ಎಂದು ಆಶಯ ವ್ಯಕ್ತಪಡಿಸಿದರು.
ಇಂದು ದೇಶಾದ್ಯಂತ ಯುವಕರಲ್ಲಿ ಹಿಂದೂ ಜಾಗೃತಿ ಅದರಲ್ಲೂ ಸನಾತನ ಧರ್ಮ ಜಾಗೃತಿ ಮೂಡುತ್ತಿರುವುದು ಶ್ಲಾಘನೀಯ. ೨೦೨೪ರಲ್ಲಿ ದೇಶದಲ್ಲಿ ಸನಾತನ ಸರ್ಕಾರ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ದೇಶಾದ್ಯಂತ ಮೋದಿಗೆ ಬೆಂಬಲಿಸುವ ಪಕ್ಷದ ಅಭ್ಯರ್ಥಿಗೆ ನಿಮ್ಮ ಬೆಂಬಲವಿರಲಿ ಎಂದರು.
2024ರಲ್ಲಿ ನಮ್ಮ ಸರ್ಕಾರ ಅಧಿಕಾರ ಬರುತ್ತಿದ್ದಂತೆಯೇ ಪಾಕ್ ಆಕ್ರಮಿತ ಕಾಶ್ಮೀರ ಸಂಪೂರ್ಣವಾಗಿ ನಮ್ಮದಾಗಲಿದೆ, ಅದು ಅಫಘಾನಿಸ್ತಾನದವರೆಗೂ ಹಬ್ಬಲಿದೆ, ಅಲ್ಲಿಯೂ ಕೂಡ ಇದೇ ಮಾದರಿಯಲ್ಲಿ ಗಣೇಶೋತ್ಸವ ಆಚರಣೆ ನಡೆಯಲಿದೆ ಎಂದು ಪ್ರಾಚೀನ ಭಾರತದ ನಕ್ಷೆಯಂತೆ ಮತ್ತು ಭಾರತ ವಿಜೃಂಭಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸನಾತನ ಧರ್ಮ ಉಳಿಯಬೇಕು, ಆಗಲೇ ಬಾಬಾಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಆದ್ಯತೆ. ಸನಾತನ ಧರ್ಮ ಉಳಿಸಲು ಮತ್ತೊಮ್ಮೆ ಶಿವಾಜಿ ಹುಟ್ಟಿ ಬರಬೇಕಿಲ್ಲ, ಪ್ರತಿ ಮನೆಮನೆಗಳಲ್ಲಿ ಕ್ಷತ್ರೀಯರು ರೂಪಗೊಳ್ಳಬೇಕಿದೆ, ಅವರು ಶಿವಾಜಿಯಂತೆ ಧರ್ಮರಕ್ಷಣೆಗೆ ಕಂಕಣ ಬದ್ಧರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಸ್ವಾಮೀಜಿ, ಸುಭಾಷ್ ಸರ್ಕಲ್ ಗಜಾನನ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ನರಗುಂದ, ರಾಣೆಬೆನ್ನೂರ ಕಾ ರಾಜಾ ಗಜಾನನ ಮಂಡಳಿಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಉಪಸ್ಥಿತರಿದ್ದರು.