ಹೊಸದಿಗಂತ ವರದಿ ,ವಿಜಯಪುರ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು ಮುಂದೆ ಮಾಧ್ಯಮದವರು ಅವರ ಬಗ್ಗೆ ನನಗೆ ಪ್ರಶ್ನೆ ಕೇಳಬೇಡಿ. ಎಲ್ಲಾದಕ್ಕೂ ಗುರ್ ಅನ್ನೋಕೆ ಬರುತ್ತಾ ? ನಮ್ಮ ಆಸ್ತಿ ಅವರು ಕಸೆದುಕೊಂಡಿಲ್ಲ. ಅವರ ಆಸ್ತಿ ನಾನು ಕಸೆದುಕೊಂಡಿಲ್ಲ. ಏನೋ ರಾಜಕೀಯ ಸಂಘರ್ಷ ಇರುತ್ತವೆ. ಈಗ ಅದೆಲ್ಲಕ್ಕೂ ವಿರಾಮ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಪಾಪ ಹಿರಿಯರಿದ್ದಾರೆ. ಅವರ ಬಗ್ಗೆ ಮಾತಾಡಬೇಡಿ ಎಂದು ಹೈಕಮಾಂಡ್ ಹೇಳಿದೆ. ನಾನು ಮಾತಾಡಲ್ಲ ಎಂದು ಹೇಳಿದ್ದೇನೆ.
ಹೈಕಮಾಂಡ್ ಹೇಳಿದ ಮೇಲೆ ಸಾಫ್ಟ್ ಆಗಲೇಬೇಕಲ್ಲ ಎಂದರು.
ರಾಜಕಾರಣಿ, ಅಧಿಕಾರಿಗಳನ್ನ ಬ್ಲ್ಯಾಕ್ಮೇಲ್ ಮಾಡುವ ಗುಂಪು ಬೆಂಗಳೂರಿನಲ್ಲಿದ್ದು, ಅಲ್ಲಿ ಒಂದು ಗುಂಪು ಕೆಲಸ ಮಾಡುತ್ತಿದೆ. ಬ್ಲ್ಯಾಕ್ ಮೇಲ್ ಅವರ ದಂಧೆ, ಯಾವುದೇ ಪಕ್ಷದವರಿದ್ದರು ಬಣ್ಣ ಬಯಲಾಗುತ್ತದೆ. ಹೀಗಾಗಿ ಸಿಡಿ ಕೇಸ್ ಸಿಬಿಐಗೆ ಕೊಡಬೇಕು. ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದಂತೆ ಸಿಬಿಐ ತನಿಖೆ ನಡೆಯಲಿ. ಇದರಲ್ಲಿ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುತ್ತದೆ ಎಂದರು.