ಹೊಸದಿಗಂತ ವರದಿ, ವಿಜಯಪುರ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ರಾಜ್ಯದ ಹಿರಿಯ ನಾಯಕರಾಗಿದ್ದು, ಕೇವಲ ಒಂದು ಕೋಮಿನ ಪರವಾಗಿ ಮಾತನಾಡಬಾರದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲರೂ ಅವರಿಗೆ ಮತ ಹಾಕಿದ್ದಾರೆ. ಯಾವುದೇ ಸಮುದಾಯಕ್ಕೆ ನೋವಾಗುವಂತೆ ಮಾತನಾಡಬಾರದು ಎಂದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ವಿಚಾರ ಕುರಿತು ಕೊಡಗು ಚಲೋ ಬದಲಿಗೆ ರಾಜಾಧಾನಿಯಲ್ಲಿ ಹೋರಾಟ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರಜಾತಂತ್ರದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರವಿದೆ. ಹೋರಾಟ ಮಾಡಲಿ ಎಂದರು.
ಮುಂದೆ ಯಾರನ್ನು ಸಿಎಂ ಮಾಡಬೇಕೆಂಬುದು ಜನರ ಕೈಯಲ್ಲಿದೆ. ನಮ್ಮ ಕೈ, ಸಿದ್ದರಾಮಯ್ಯ ಕೈ, ಹಾಗೂ ಯಾರ ಕೈಯ್ಯಲ್ಲೂ ಇಲ್ಲ ಎಂದರು.
ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಉರುಳುತ್ತವೆ ಎಂದಿದ್ದ ಲೋಕಸಭಾ ಸದಸ್ಯ ಜಗ್ಗೇಶ್ ವಿವಾದಾತ್ಮಕ ಹೇಳಿಕೆಯನ್ನು ಯತ್ನಾಳ ಸಮರ್ಥಿಸಿಕೊಂಡಿದ್ದು, ನಿಮ್ಮ ಪ್ರಕಾರ ಅದು ವಿವಾದಾತ್ಮಕ ಇರಬೇಕು. ಟಿಪ್ಪು ಸುಲ್ತಾನ್ ಕಾಲದಲ್ಲಿ ಲಕ್ಷಾಂತರ ಕೊಡಗಿನ ನಾಗರಿಕರ ಕೊಲೆಯಾಗಿದೆ. ಕೊಡಗಿನಲ್ಲಿ ಸಂಧಾನಕ್ಕೆ ಕರೆದ ಟಿಪ್ಪು ಸುಲ್ತಾನ್ ಮೋಸ ಮಾಡಿದ್ದ. ಅದಕ್ಕಾಗಿ ಕೊಡಗಿನ ಜನರಲ್ಲಿ ಟಿಪ್ಪು ಬಗ್ಗೆ ದ್ವೇಷವಿದೆ. ಕೊಡಗಿನ ಜಿಲ್ಲೆಯ ಜನರಿಗೆ ಆಗ ನೋವು ಆಗಿದೆ. ಅವರ ಭಾವನೆಯನ್ನು ನಾವು ಗೌರವಿಸಬೇಕು ಎಂದರು.