ಹೊಸದಿಗಂತ ವರದಿ ಮಡಿಕೇರಿ:
ಮಾಜಿ ಸಚಿವ, ಕೊಡಗಿನ ಹಿರಿಯ ರಾಜಕಾರಣಿ ಬಿ.ಎ. ಜೀವಿಜಯ ಕೊನೆಗೂ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹಲವು ವರ್ಷ ರಾಜಕಾರಣದಲ್ಲಿ ತೊಡಗಿಸಿಕೊಂಡು ಜನಸೇವೆ ಮಾಡಿದ್ದೇನೆ. ಪ್ರಸಕ್ತ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನೂ ಕೆಪಿಸಿಸಿ ಅಧ್ಯಕ್ಷರಿಗೆ ಕಳುಹಿಸಿದ್ದೇನೆ ಎಂದರು.
ರಾಜಕೀಯದಲ್ಲಿ ತತ್ವ, ಸಿದ್ಧಾಂತಗಳು ಮರೆಯಾಗಿವೆ. ಕೊಡಗಿನಲ್ಲಿ ಬೇರೆ ಜಿಲ್ಲೆಯವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಕಾರ್ಯಕರ್ತರ ವಿರೋಧ ಇದೆ ಎಂದು ರಾಜ್ಯ ನಾಯಕರಿಗೆ ಹೇಳಿದ್ದೆ. ಆದರೆ ನನ್ನ ಮಾತಿಗೆ ಯಾವುದೇ ಬೆಲೆ ಸಿಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೊಡಗಿನ ಜ್ವಲಂತ ಸಮಸ್ಯೆಗಳು ಬಗೆಹರಿಯಬೇಕಿದೆ. ಆ ನಿಟ್ಟಿನಲ್ಲಿ ತಾನು ಈ ಚುನಾವಣೆಯಲ್ಲಿ ಕೊಡಗಿನವರಿಗೆ ಬೆಂಬಲ ನೀಡುವುದಾಗಿ ಹೇಳಿದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಳಿಕ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರಲ್ಲದೆ, ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಜೀವಿಜಯ ಬದಲಾಗಿ ಡಾ.ಮಂಥರ್ ಗೌಡರಿಗೆ ಟಿಕೆಟ್ ನೀಡಿತ್ತು. ಇದರಿಂದ ಜೀವಿಜಯ ಅವರು ಅವರು ಅಸಮಾಧಾನಗೊಂಡಿದ್ದರಲ್ಲದೆ, ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರ ಪರ ಕೆಲವೆಡೆ ಪ್ರಚಾರವನ್ನು ಮಾಡಿದ್ದರು. ಕಾಂಗ್ರೆಸ್ ನಾಯಕರು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರಾದರೂ, ಕೆಲವು ದಿನಗಳ ಕಾಲ ತಟಸ್ಥವಾಗಿ ಉಳಿದಿದ್ದರು.
ಇದೀಗ ಅವರು ಕಾಂಗ್ರೆಸ್ ತೊರೆದಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಜೀವಿಜಯ ಅವರಿಗೆ ಕ್ಷೇತ್ರದಲ್ಲಿ ತಮ್ಮದೇ ಆದ ಬೆಂಬಲಿಗರು ಹಾಗೂ ಮತದಾರರಿದ್ದು, ಅವರ ನಿರ್ಗಮನದಿಂದ ಕಾಂಗ್ರೆಸ್’ಗೆ ಒಂದಷ್ಟು ನಷ್ಟವಾಗುವುದು ನಿಶ್ಚಿತ.