ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಹೊಸ ಸರಕಾರ ಬಂದಿದೆ. ಇದೊಂದು ಡಬಲ್ ಸ್ಟೇರಿಂಗ್ ಸರಕಾರವಾಗಿದ್ದು, ಚುನಾವಣೆಗೂ ಮುನ್ನ ಘೋಷಿಸಿರುವ ಗ್ಯಾರಂಟಿಗಳನ್ನು ಜಾರಿ ಮಾಡದೇ ಇದ್ದರೆ ರಾಜ್ಯದ ಜನತೆಗೆ ಅವಮಾನ ಮಾಡಿದಂತೆ ಎಂದು ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕ ಹುದ್ದೆ ಅಲ್ಲ. ಪಾರ್ಟಿ ಘೋಷಣೆಯಿಂದ ಇದು ಸಿಕ್ಕಿದೆ. ಪ್ರತಿ ಸಭೆಯಲ್ಲೂ ಸಿಎಂ ಮಾತನಾಡುವ ಮೊದಲು ಉಪ ಮುಖ್ಯಮಂತ್ರಿ ಮಾತನಾಡುತ್ತಾರೆ. ಹೊಸ ಸರಕಾರ ಬಂದಾಗ ಮುಖ್ಯಮಂತ್ರಿಗಳು ಖಡಕ್ ಮಾತನಾಡುವುದು ಪರಿಪಾಠ. ಆದರೆಇಲ್ಲಿ ಸಿಎಂ ಸೈಲೆಂಟ್, ಡೆಪ್ಯುಟಿ ಸಿಎಂ ವೈಲೆಂಟ್. ಅಧಿಕಾರಿಗಳು, ಪೊಲೀಸರು, ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ಧಮ್ಕಿ ಹಾಕುವುದು ಅವರ ಹಣೆಬರಹ ಎಂದರು.
ಜನರಿಗೆ ಕೊಟ್ಟ ಗ್ಯಾರಂಟಿಗಳನ್ನು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ರವರ ಡಬಲ್ ಸ್ಟೇರಿಂಗ್ ಸರಕಾರ ಮಾಡದೆ ಇರುವುದು ರಾಜ್ಯದ ಜನರಿಗೆ ಮಾಡಿದ ದೊಡ್ಡ ಅವಮಾನ. ಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ ಅವರು ಪ್ರತ್ಯೇಕ ಗ್ಯಾರಂಟಿ ಕಾರ್ಡ್ ಹಿಡಿದರು. ಸರಕಾರ ಬಂದು 24 ಗಂಟೆಗಳ ಒಳಗೆ ಮಾಡುವುದಾಗಿ ಹೇಳಿದ್ದರು. 240 ಗಂಟೆ ಕಳೆದರೂ ಅವು ಈಡೇರಿಲ್ಲ. ಶಾಸಕರು ಮತ್ತು ಸಿಎಂ, ಡಿಸಿಎಂರವರು ಸೋನಿಯಾ- ರಾಹುಲ್ ಮನೆಗೆ ಹೋಗಿ ಖಾತೆ ಗ್ಯಾರಂಟಿ ಮಾಡುತ್ತಿದ್ದಾರೆ. ಜನರ ಭಾವನೆಗೆ ಬೆಲೆ ಇಲ್ಲ ಎಂದು ಟೀಕಿಸಿದರು.