ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕರ್ನಾಟಕದ ರಾಯಚೂರು ಜಿಲ್ಲೆಯ ನಾಲ್ವರು ಉಮ್ರಾ ಮಾಡಲು ಹೋಗಿ ದುಬೈನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ದುಬೈನಲ್ಲಿ ಬಸ್ ಮತ್ತು ಕಂಟೇನರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕರ್ನಾಟಕದ ರಾಯಚೂರು ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ದುಬೈಗೆ ಉಮ್ರಾ ಯಾತ್ರೆಗಾಗಿ ತೆರಳಿದ ರಾಯಚೂರಿನ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಮೃತರು ರಾಯಚೂರಿನ ಆಶಾಪುರ ರಸ್ತೆಯ ದ್ವಾರಕಾನಗರದವರು.
ರಾಯಚೂರು ಕೃಷಿ ವಿವಿಯಲ್ಲಿ ಕುಲಪತಿಗಳ ಆಪ್ತ ಸಹಾಯಕರಾಗಿದ್ದ ಶಫಿ ಸುಳ್ಳೇದ್ (53), ಅವರ ಪತ್ನಿ ಸಿರಾಜ್ ಬೇಗಂ (45), ಪುತ್ರಿ ಶಿಫಾ (20), ತಾಯಿ ಬೇಬಿ ಜಾನ್ (64) ಮೃತಪಟ್ಟಿದ್ದಾರೆ. ಮೃತ ಶಫಿ ಸುಳ್ಳೇದ ಅವರ ಪುತ್ರ ಸಮೀರ್ ತೀವ್ರವಾಗಿ ಗಾಯಗೊಂಡಿದ್ದು, ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಚೂರು ಎಸ್ಪಿ ಬಿ.ನಿಖಿಲ್ ತಿಳಿಸಿದ್ದಾರೆ.
ಈ ಕುಟುಂಬವು ಫೆ.14ರಂದು ರಾಯಚೂರಿನಿಂದ ಮೆಕ್ಕಾಗೆ ತೆರಳಿತ್ತು. ಮಂಗಳವಾರ (ಫೆ.21) ಸಂಜೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದುಬೈನಲ್ಲಿ ಅಪಘಾತ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ ಬಸ್ ಕಂಟೈನರ್ಗೆ ಡಿಕ್ಕಿ ಹೊಡೆದಿದೆ.