ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಮಕ್ಕಳಿಗೆ ಇನ್ಮುಂದೆ ಹಬ್ಬ, ಹರಿದಿನ, ವಿಶೇಷ ಸಂದರ್ಭಗಳಲ್ಲಿ ವಿಶೇಷ ಭೋಜನ ಬಡಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.
‘ಶಾಲೆಗಾಗಿ ನಾವು ನೀವು’ ಕಾರ್ಯಕ್ರಮದಡಿ ಈ ವ್ಯವಸ್ಥೆಗೆ ಟ್ರಸ್ಟ್, ಸಂಘ-ಸಂಸ್ಥೆಗಳು, ಎಸ್ಡಿಎಂಸಿಗಳು, ಸಾರ್ವಜನಿಕರೂ ಸೇರಿದಂತೆ ಸಮುದಾಯದವರು ಆರ್ಥಿಕ ನೆರವು ನೀಡಬಹದು. ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ನೀಡಬಹುದು. ಆಹಾರ ಸಂಪೂರ್ಣ ಸಸ್ಯಾಹಾರ ಆಗಿರಬೇಕು. ಇಲಾಖೆ ಗುರುತಿಸಿರುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿರಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಬೇಕು.
ಯಾವುದೇ ವರ್ಗ, ಜಾತಿ, ಮತ, ಲಿಂಗ, ಭೇದವಿಲ್ಲದೆ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವುದು ಇದರ ಉದ್ದೇಶ. ಸಮುದಾಯದಲ್ಲೂ ಒಗ್ಗಟ್ಟು, ಸಹಬಾಳ್ವೆ, ಬಾಂಧವ್ಯ, ಐಕ್ಯತೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಇಲಾಖೆಯು ಸುತ್ತೋಲೆಯಲ್ಲಿ ತಿಳಿಸಿದೆ.