ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಥಿಯಾ ಬಿಕ್ಕಟ್ಟಿನಲ್ಲಿ ತತ್ತರಿಸಿರುವ ಶ್ರೀಲಂಕಾದಲ್ಲಿ ಇದೀಗ ಇಂಧನದ ಹಾಹಾಕಾರ ಮುಗಿಲುಮುಟ್ಟಿದ್ದು, ಸದ್ಯಇಂಧನ ಖರೀದಿಗಾಗಿ ಭಾರತವು ವಿಸ್ತರಿಸಿದ USD 500 ಮಿಲಿಯನ್ ಸಾಲದೊಂದಿಗೆ ಶ್ರೀಲಂಕಾದಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ಇಂಧನ ಬರಿದಾಗಬಹುದು ಎಂದು ಹೇಳಲಾಗುತ್ತಿದೆ.
ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಜನರು ಸುದೀರ್ಘವಾದ ವಿದ್ಯುತ್ ಕಡಿತ, ಇಂಧನ, ಆಹಾರ ಮತ್ತು ಇತರ ಮೂಲಭೂತ ಸರಕುಗಳ ಕೊರತೆಯನ್ನು ಎದುರಿಸುತ್ತಿದ್ದು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಏಪ್ರಿಲ್ 15, 18 ಮತ್ತು 23 ರಂದು ಇನ್ನೂ ಮೂರು ಭಾರತೀಯ ನೌಕೆಗಳಲ್ಲಿ ಸಾಮಗ್ರಿಗಳು ಶ್ರೀಲಂಕಾಕ್ಕೆ ರವಾನೆಯಾಗಲಿವೆ. ಶ್ರೀಲಂಕಾ ಸರ್ಕಾರವು ಭಾರತದಿಂದ ಮತ್ತಷ್ಟು ಸಹಾಯವನ್ನು ಕೋರದೆ ಹೋದರೆ ಡೀಸೆಲ್ ಸೇರಿದಂತೆ ಇಂಧನ ಸಂಪೂರ್ಣವಾಗಿ ಖಾಲಿಯಾಗಬಹುದು ಎಂದು ಹೇಳಲಾಗುತ್ತಿದೆ.
ಈಗಾಗಲೇ ಅಲ್ಲಿ ಡೀಸೆಲ್ ಕೊರತೆಯಿಂದ ಕೆಲವು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಮುಚ್ಚಿರುವುದರಿಂದ ಪ್ರತಿದಿನ 10 ಗಂಟೆಗಳ ಕಾಲ ವಿದ್ಯುತ್ ಕಡಿತವಾಗಿದೆ.
ಇತ್ತ ಆಕ್ರೋಶಗೊಂಡ ಜನರು ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀಲಂಕಾ ಅಧ್ಯಕ್ಷರು ಅಸಮರ್ಥರಾಗಿದ್ದು, ರಾಜೀನಾಮೆ ನೀಡುವಂತೆ ಕರೆ ನೀಡಿದ್ದಾರೆ.