ಹೊಸದಿಗಂತ ವರದಿ ಬಳ್ಳಾರಿ:
ಮಾಜಿ ಸಚಿವ, ಸಹೋದರ ಗಾಲಿ ಜನಾರ್ಧನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ ಎಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಸಹೋದರ ಗಾಲಿ ಜನಾರ್ದನ ರೆಡ್ಡಿ ಸ್ವಂತ ಪಕ್ಷ ಕಟ್ಟುವ ವಿಚಾರದಲ್ಲಿ ಆತುರದ ನಿರ್ಧಾರ ತೆಗದುಕೊಂಡಿದ್ದಾರೆ. ಆಲೋಚನೆ ಮಾಡಿ ರಾಜಕೀಯ ನಿರ್ಧಾರ ಪ್ರಕಟಿಸಬೇಕಿತ್ತು, ಅದನ್ನು ಬಿಟ್ಟು ತರಾತುರಿಯಲ್ಲಿ ಪಕ್ಷ ಘೋಷಣೆ ಮಾಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ.
ಜನಾರ್ಧನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಅವರು ಬಳ್ಳಾರಿ ನಗರಕ್ಕೆ ಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಪಕ್ಷದ ವರಿಷ್ಠರು ಸೂಚನೆ ನೀಡಿದರೆ ಅರುಣಾ ಲಕ್ಷ್ಮೀ ಅವರ ವಿರುದ್ಧ ನಾನೂ ಸ್ಪರ್ಧೆ ಮಾಡುವೆ. ರಾಜಕೀಯ ಬೇರೆ, ಸಂಬಂಧಗಳೇ ಬೇರೆ, ನಮ್ಮದು ರಾಷ್ಟ್ರೀಯ ಪಕ್ಷ, ತತ್ವ ಸಿದ್ಧಾಂತವುಳ್ಳ ಪಕ್ಷ ನಮ್ಮದು. ಸುಮಾರು ವರ್ಷಗಳ ಇತಿಹಾಸವುಳ್ಳ ಪಕ್ಷ ನಮ್ಮದು, ಸಹೋದರ ರೆಡ್ಡಿ ಅವರು ತಾಳ್ಮೆಕಳೆದುಕೊಂಡು ಆತುರದ ನಿರ್ಧಾರ ಕೈಗೊಂಡಿದ್ದಾರೆ ಇದು ಸರಿಯಾದ ಬೆಳವಣಿಗೆಯಲ್ಲ ಎಂದರು.