ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’: ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ!

ಹೊಸದಿಗಂತ ವರದಿ,ಚಿಕ್ಕಬಳ್ಳಾಪುರ:

ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‌ ನಟನೆಯ ಗಂಧದ ಗುಡಿ ಚಿತ್ರ ಕೆಲವೇ ದಿನಗಳಲ್ಲಿ ತೆರೆ ಕಾಣುತ್ತಿರುವ ಹಿನ್ನೆಲೆ ಅಪ್ಪು ಅಭಿಮಾನಿಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಆವಲಬೆಟ್ಟಕ್ಕೆ ಬೈಕ್ ಗಳಲ್ಲಿ ಗಂಧದಗುಡಿ ರೈಡ್ ಮಾಡುವುದರ ಮೂಲಕ ಅಭಿಮಾನವನ್ನು ಮೆರೆದಿದ್ದಾರೆ.

ಅಪ್ಪು ಅವರಿಗೆ ಪರಿಸರ, ಪ್ರಕೃತಿ ಎಂದರೆ ಎಲ್ಲಿಲ್ಲದ ಪ್ರೀತಿ. ಪ್ರಕೃತಿಯನ್ನೇ ಆರಾಧಿಸಿ ಅವರು ನಟಿಸಿರುವ ʻಗಂಧದಗುಡಿʼ ಚಲನಚಿತ್ರ ತೆರೆ ಕಾಣಲು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಎಲ್ಲೆಲ್ಲೂ ಗಂಧದಗುಡಿ ಸದ್ದು ಕೇಳಿಬರುತ್ತಿದೆ. ಇದೇ ಹೊತ್ತಲ್ಲಿ ಅಪ್ಪುವಿನ ನೆನಪಿನಾರ್ಥಕವಾಗಿ ಅಪ್ಪು ಫ್ಯಾನ್ಸ್ ಗಂಧದಗುಡಿ ರೈಡ್ ಹೊರಟಿದ್ದಾರೆ. ಅಲ್ಲದೇ ಅಪ್ಪುವಿನ ಹೆಸರಲ್ಲಿ ಆವಲಬೆಟ್ಟದಲ್ಲಿ ಆಲದ ಸಸಿಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಿಂದ ಆವಲಬೆಟ್ಟಕ್ಕೆ ಕಾರು ಹಾಗೂ ಬೈಕ್‌ಗಳ ಮೂಲಕ ಭಾನುವಾರ ಬೆಳ್ಳಂಬೆಳಗ್ಗೆ ರೈಡ್ ಫಾರ್ ಅಪ್ಪು ಅಂತ ಗಂಧದಗುಡಿ ರೈಡ್ ಹೊರಟ ಅಭಿಮಾನಿಗಳಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಚಾಲನೆ ನೀಡಿದರು.

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಅಫ್ಪು ಫ್ಯಾನ್ಸ್ ಆವಲಬೆಟ್ಟಕ್ಕೆ ಆಗಮಿಸಿದರು.

ಅಪ್ಪು ನೆನೆಪಿಗಾಗಿ ರೈಡ್ ಅಷ್ಟೇ ಅಲ್ಲದೆ ಆವಲಬೆಟ್ಟದಲ್ಲಿ ಅಪ್ಪು ಹೆಸರಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟು ಅವರ ಹೆಸರು ಅಜರಾಮರವಾಗುವಂತೆ ಮಾಡಿದರು.

ಇಂಚರ ಸ್ಟುಡಿಯೋ, ದ್ವಿಚಕ್ರ ಪ್ರೆಸೆಂಟ್ಸ್ ಸಹಯೋಗದೊಂದಿಗೆ ನೂರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಆಗಮಿಸಿದ ಅಪ್ಪು ಅಭಿಮಾನಿಗಳು, ಅರಣ್ಯ ಇಲಾಖೆಯ ಸಹಕಾರದಿಂದ ಆವಲಬೆಟ್ಟದ ಎರಡು ಕಿಲೋಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟರು.

ಆವಲಬೆಟ್ಟದ ಪ್ರವೇಶದ್ವಾರದ ಬಳಿ ಆಲದ ಸಸಿ ನೆಟ್ಟು ಪೂಜೆ ಪುನಸ್ಕಾರ ಮಾಡಿ ಅಪ್ಪು ಅಂತ ನಾಮಕರಣ ಸಹ ಮಾಡಿದರು.

ಬೆಟ್ಟದ ರಸ್ತೆಯುದ್ದಕ್ಕೂ ಆಲದ ಸಸಿಗಳನ್ನು ನೆಟ್ಟು ಇಡೀ ದಿನ ಆವಲಬೆಟ್ಟದಲ್ಲೇ ಅಪ್ಪು ನೆನಪಿನಾರ್ಥಕವಾಗಿ ಕಾಲ ಕಳೆದು ಅಪ್ಪುವನ್ನ ನೆನೆದರು.

ಇದೇ ತಿಂಗಳು 29 ಕ್ಕೆ ಅಪ್ಪು ನಮ್ಮನ್ನ ಆಗಲಿ ಒಂದು ವರ್ಷ ಆಗಲಿದ್ದು, ಮುನ್ನಾ ದಿನವೇ ಅಭಿಮಾನಿಗಳಿಗೆ ಅಪ್ಪು ನಟನೆಯ ಗಂಧದಗುಡಿ ಸಿನಿಮಾ ಗಿಫ್ಟ್ ಆಗಿ ಸಿಗಲಿದೆ.

ಗಂಧದಗುಡಿ ಚಿತ್ರಕ್ಕೆ ಸ್ವಾಗತ ಕೋರುವುದಕ್ಕೆ ಅಪ್ಪುವನ್ನ ಕಣ್ತುಂಬಿಕೊಳ್ಳೋಕೆ ಈಗಾಗಲೇ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಅಪ್ಪುವಂತೆ ಫ್ಯಾನ್ಸ್ ಕೂಡ ಗಂಧದಗುಡಿ ರೈಡ್ ಹೆಸರಲ್ಲಿ ನೂರಾರು ಆಲದ ಸಸಿ ನೆಟ್ಟು ಮಾದರಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!