ಹೊಸದಿಗಂತ ವರದಿ ಮೈಸೂರು:
ನಗರದ ಬಲ್ಲಾಳ್ ವೃತ್ತದ ಬಳಿಯಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, 2019-20 ಮತ್ತು 2020 -21 ರ ಘಟಿಕೋತ್ಸವ ಸಮಾರಂಭ
ಅ. 18 ರಂದು ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ನಡೆಯಲಿದೆ.
ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕಗಳ ವಿಶ್ವವಿದ್ಯಾಲಯದಿಂದ ಐದನೇ ಘಟಿಕೋತ್ಸವದ ಅಂಗವಾಗಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸುದೀರ್ಘ 40 ವರ್ಷಗಳ ಸೇವೆ ಮಾಡಿರುವ ವಿದುಷಿ ಡಿ. ಶಶಿಕಲಾ (ವಿಶೇಷ ಚೇತನ) ಅವರಿಗೆ, ಹಿಂದುಸ್ತಾನಿ ಸಂಗೀತ ಗಾಯನದಲ್ಲಿ ಪ್ರಸಿದ್ಧರಾದ ಪಂಡಿತ್ ವಿನಾಯಕ ತೊರವಿ ಅವರಿಗೆ ಹಾಗೂ ಸಂಗೀತದಲ್ಲಿ, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಮಧುಸೂದನ್ ಸಾಯಿ ಅವರಿಗೆ, 6ನೇ ಘಟಿಕೋತ್ಸವದ ಅಂಗವಾಗಿ ಸಂಗೀತ ಸಂಶೋಧನೆಯಲ್ಲಿ ತೊಡಗಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಹಿಂದುಸ್ತಾನಿ ಸಂಗೀತ ಕ್ಷೇತ್ರದ ಪರಿಣಿತರಾದ ಪಂಡಿತ ಶ್ರೀಪಾದ ಹೆಗಡೆ ಕಂಪ್ಲಿ ಮತ್ತು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಪ್ರೊ. ಎಸ್ ಸಿ ಶರ್ಮಾ ಅವರಿಗೆ ಒಟ್ಟು ಆರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.
ಅಲ್ಲದೆ ವಿವಿಧ ವಿಷಯಗಳಲ್ಲಿ ದೇಸಿ ಸಂಗೀತ ಐದನಿ ಕುರಿತಂತೆ ಡಾ. ಹಂಸಲೇಖ ಅವರಿಗೆ, ಪುಜಾಸತ್ತಾತ್ಮಕ ಪಕ್ರಿಯೆಯಲ್ಲಿ ಡಾ. ರಾಜಕುಮಾರ್ ಪಾತ್ರ ವಿಷಯದಲ್ಲಿ ಮಂಜುನಾಥ್ ಎಂ ಅವರಿಗೆ, ಕೋನಾರ್ಕ್ ದೇವಾಲಯದ ವಾಸ್ತುಶಿಲ್ಪದಲ್ಲಿನ ನೃತ್ಯಭಂಗಿ ಕುರಿತು ಶ್ರೀಮತಿ ಶಾಲಿನಿ ಎ ಆರ್, ದಕ್ಷಿಣ ಭಾರತದ ಕರ್ನಾಟಕ ಸಂಗೀತದಲ್ಲಿ ತಂತಿ ವಾದ್ಯಗಳು ವಿಷಯದಲ್ಲಿ ಡಾ.ಸೌಮ್ಯಾ ಎಸ್ ರಂಗಭೂಮಿ ಒಂದು ವೃತ್ತಿಪರ ಅಧ್ಯಯನಕ್ಕೆ ಕೆ ಎನ್ ಹಿರಣ್ಣಯ್ಯ ಅವರಿಗೆ ಮತ್ತು ಯೋಗಾ ಮತ್ತು ಪ್ರದರ್ಶನ ಕಲೆಗಳ ಶಿಕ್ಷಣ ಮತ್ತು ಮಾನಸಿಕ ಬದಲಾವಣೆಯ ಮೇಲಿನ ಪರಿಣಾಮಗಳ ವಿಷಯದಲ್ಲಿ ಡಾ. ಎ ಲೋಕೇಶ್ ಅವರು ಸೇರಿದಂತೆ ಒಟ್ಟು ಆರು ಜನರಿಗೆ ಡಿಲೀಟ್ ಪದವಿ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೋ. ನಾಗೇಶ್ ವಿ ಬೆಟ್ಟಕೋಟೆ ತಿಳಿಸಿದರು.
ಸೋಮವಾರ ನಗರದ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆವರಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ವಿಶ್ವವಿದ್ಯಾಲಯದ 5 ಮತ್ತು 6 ನೇ ಘಟಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಘಟಿಕೋತ್ಸವದ ಅಂಗವಾಗಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯದ ರಾಜ್ಯಪಾಲ ತಾವರ್ ಚಂದ್ ಗೆಲ್ಲೋಟ್ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಉಪಸ್ಥಿತರಿರುವರು, ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವದ ಭಾಗವಹಿಸುವರು.