ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವರು ನನಗೆ ಮತ್ತೊಂದು ಜನ್ಮ ಕೊಟ್ಟಿದ್ದಾನೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಹಾಗೆಯೇ ತನ್ನ ಮೇಲಿನ ಹಲ್ಲೆಗೆ ಯಾರನ್ನೂ ದೂಷಿಸಲು ಬಯಸುವುದಿಲ್ಲ ಎಂದರು. ಗುರುವಾರ ತನ್ನ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಇಂದು ಪ್ರತಿಕ್ರಿಯಿಸಿದ ಅವರು, ಅಲ್ಲಾ ಅವರಿಗೆ ಮತ್ತೊಂದು ಅವಕಾಶ ನೀಡಿದ್ದು, ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ನಿನ್ನೆ ಗುಂಡು ಹಾರಿಸಲಾಗಿದ್ದು, ಈ ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಗಾಯಗೊಂಡಿದ್ದರು. ಇವರ ಜೊತೆಗಿದ್ದ ಇತರ ನಾಲ್ವರು ಗಾಯಗೊಂಡಿದ್ದು, ಅಧಿಕಾರಿಗಳು ಇಮ್ರಾನ್ ಜೊತೆಗೆ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್ನ ಜಫರಾಲಿ ಖಾನ್ ಚೌಕ್ನಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ.
ಇಮ್ರಾನ್ ‘ರಿಯಲ್ ಫ್ರೀಡಂ’ ಎಂಬ ಸ್ಥಳೀಯ ರ್ಯಾಲಿ ವೇಳೆ ಕಂಟೈನರ್ ಟ್ರಕ್ನಲ್ಲಿ ಮಾತನಾಡುತ್ತಿದ್ದಾಗ, ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಅವರ ಕಾಲಿಗೆ ಗಾಯವಾಗಿದೆ. ತಕ್ಷಣ ಸ್ಪಂದಿಸಿದ ಭದ್ರತಾ ಸಿಬ್ಬಂದಿ ಗಾಯಾಳು ಇಮ್ರಾನ್ ಖಾನ್ ನನ್ನು ಕಂಟೈನರ್ ನಿಂದ ಬುಲೆಟ್ ಪ್ರೂಫ್ ವಾಹನಕ್ಕೆ ಕರೆದೊಯ್ದರು. ಸದ್ಯ ಇಮ್ರಾನ್ ಖಾನ್ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಧ್ಯೆ, ಇಮ್ರಾನ್ ಖಾನ್ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ ಕಾರಣವನ್ನು ಬಹಿರಂಗಪಡಿಸಿದ್ದಾನೆ. ಇಮ್ರಾನ್ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಹಾಗಾಗಿಯೇ ಅವರನ್ನು ಕೊಲ್ಲಲು ಬಯಸಿದ್ದಾಗಿ ತಿಳಿಸಿದರು. ಹಸದ್ ಅಯೂಬ್ ಖಾನ್ ಎಂಬ ಪಾಕಿಸ್ತಾನಿ ಪತ್ರಕರ್ತ ಆರೋಪಿಯ ವಿಡಿಯೋವನ್ನು ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.