ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ, ಛತ್ತೀಸ್ಗಢ ಮತ್ತು ಒಡಿಶಾದಲ್ಲಿ ಭಾರೀ ಮಳೆಯಿಂದಾಗಿ ಗೋದಾವರಿ ಮತ್ತು ಅದರ ಉಪನದಿಗಳು ಉಗ್ರರೂಪ ತಾಳಿವೆ. ಪರಿಣಾಮವಾಗಿ ಗೋದಾವರಿ ಪ್ರವಾಹದಂತೆ ಭೋರ್ಗರೆಯುತ್ತಿದ್ದು, ಭದ್ರಾಚಲಂ ಸಂಪೂರ್ಣ ಜಲಾವೃತವಾಗಿದೆ. ಪ್ರತಿ ಗಂಟೆಗೂ ಗೋದಾವರಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಶುಕ್ರವಾರ ಬೆಳಗ್ಗೆ 7 ಗಂಟೆ ವೇಳೆಗೆ ಗೋದಾವರಿ ನೀರಿನ ಮಟ್ಟ 67 ಅಡಿ ತಲುಪಿದೆ. ಪ್ರವಾಹ ಇದೇ ರೀತಿ ಮುಂದುವರಿದರೆ 24 ಗಂಟೆಗಳಲ್ಲಿ 75ರಿಂದ 80 ಅಡಿ ತಲುಪಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಭದ್ರಾಚಲಂನಲ್ಲಿ ಅಧಿಕಾರಿಗಳು ಅಪಾಯದ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.
ಗೋದಾವರಿಗೆ 21 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 21,47,381 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇನ್ನೂ 48 ಗಂಟೆಗಳು ಬಹಳ ನಿರ್ಣಾಯಕವಾಗಿದ್ದು, ಗೋದಾವರಿ ಜಲಾನಯನ ಪ್ರದೇಶದ ಜನರು ಜಾಗರೂಕರಾಗಿರಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಭದ್ರಾಚಲಂ ಸೇತುವೆ ಮೇಲೆ ಈಗಾಗಲೇ ಸಂಚಾರ ನಿಷೇಧಿಸಲಾಗಿದೆ.
ಪೊಲೀಸರು ಭದ್ರಾಚಲಂ ಪಟ್ಟಣದಾದ್ಯಂತ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಪ್ರವಾಹದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 62 ಗ್ರಾಮಗಳ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇದುವರೆಗೂ 3,001 ಕುಟುಂಬಗಳನ್ನು 48 ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅಪಾಯವನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅನುದೀಪ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.