ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕವಾಗಿ ಖಾದ್ಯತೈಲದ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ಅಡುಗೆ ಎಣ್ಣೆಯ ಬೆಲೆಯನ್ನು ಇಳಿಕೆ ಮಾಡುವಂತೆ ಖಾದ್ಯ ತೈಲ ತಯಾರಿಕಾ ಮತ್ತು ಮಾರುಕಟ್ಟೆ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.
ಅಡುಗೆ ಎಣ್ಣೆಗಳ ಗರಿಷ್ಠ ಚಿಲ್ಲರೆ (MRP) ಬೆಲೆಯನ್ನು ಲೀಟರ್ ಗೆ 10 ರೂ. ಇಳಿಕೆ ಮಾಡುವಂತೆ ಕಂಪನಿಗಳಿಗೆ ಕೇಂದ್ರ ಸರ್ಕಾರ ಕೇಳಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ . ಭಾರತವು ತನ್ನ ವಾರ್ಷಿಕ ಖಾದ್ಯ ತೈಲ ಬೇಡಿಕೆಯ ಸುಮಾರು 56 ಪ್ರತಿಶತವನ್ನು ಆಮದುಗಳಿಂದ ಪೂರೈಸುತ್ತದೆ. ಹಾಗಾಗಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಯಲ್ಲಿನ ಕುಸಿತವು ಸ್ಥಳೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅದಾನಿ ವಿಲ್ಮಾರ್ ಮತ್ತು ರುಚಿ ಸೋಯಾ ಸೇರಿದಂತೆ ಖಾದ್ಯ ತೈಲಗಳ ಎಲ್ಲಾ ಪ್ರಮುಖ ಉತ್ಪಾದಕರು ಮುಂದಿನ 7-10 ದಿನಗಳಲ್ಲಿ ಚಿಲ್ಲರೆ ಬೆಲೆಗಳನ್ನು ಪರಿಷ್ಕರಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈಗಾಗಲೆ ದೇಶದಲ್ಲಿ ಅಡುಗೆ ಎಣ್ಣೆಗಳ ಬೆಲೆಯು ಕಡಿಮೆಯಾಗಿದ್ದು ಪ್ರಸ್ತುತ ಲೀಟರ್ ಗೆ 10 ರೂ ಕಡಿತವಾಗುವ ಸಂಭವವಿದೆ. ಅಲ್ಲದೇ ದೇಶಾದ್ಯಂತ ಒಂದೇ ಬ್ರಾಂಡ್ ಖಾದ್ಯ ತೈಲಕ್ಕೆ ಎಂಆರ್ಪಿಯ ಏಕರೂಪತೆಯನ್ನು ಕಾಯ್ದುಕೊಳ್ಳುವಂತೆ ಕೇಂದ್ರವು ಕಂಪನಿಗಳಿಗೆ ಈ ಹಿಂದೆ ಎಂಆರ್ಪಿಯಲ್ಲಿ ಪ್ರತಿ ಲೀಟರ್ಗೆ 3-5 ರೂಪಾಯಿ ವ್ತ್ಯಾಸವಾಗುತ್ತಿತ್ತು. ಅದನ್ನು ತಡೆಹಿಡಿದು ಎಂಆರ್ಪಿಯಲ್ಲಿ ಏಕರೂಪತೆ ತರುವಂತೆ ಕೇಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.