ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದಲ್ಲಿ ಉಚಿತ ಮರಳು ನೀತಿ ತರಲು ಚಿಂತನೆ ನಡೆಸಿದ್ದೇವೆ. 10 ಲಕ್ಷಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವವರಿಗೆ ಸರ್ಕಾರವೇ ಉಚಿತವಾಗಿ ಮರಳು ಪೂರೈಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಹೇಳಿದರು.
ವಿಧಾನಪರಿಷತ್ನಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ವಿಚಾರವಾಗಿ ಭ್ರಷ್ಟಾಚಾರ ನಡೆಯುತ್ತಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಗಣಿ ಮಾಲೀಕರ ಬಳಿ ಹಫ್ತಾ ವಸೂಲಿ ಮಾಡ್ತಿರುವುದೂ ಸತ್ಯ. ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಹಫ್ತಾ ವಸೂಲಿ ನಡೆಯುತ್ತಿದೆ. ಆದರೆ, ಇಲಾಖೆಗೆ ನಾನು ಬಂದ ನಂತರ ಹಫ್ತಾ ನೀಡದಂತೆ ಸೂಚನೆ ಕೊಟ್ಟಿದ್ದೇನೆ. ಹಫ್ತಾ ನೀಡದಂತೆ ಗಣಿ ಮಾಲೀಕರಿಗೆ ಸೂಚನೆ ನೀಡಿದ್ದೇನೆ ಎಂದು ನಿರಾಣಿ ಹೇಳಿದರು.
ಗಣಿಗಾರಿಕೆಗೆ ಪರವಾನಗಿ ಸಿಗುವುದು ಸಾಕಷ್ಟು ಸಮಸ್ಯೆ ಇದೆ. ಇದನ್ನು ಸರಳೀಕರಣ ಮಾಡಲು ಹೊಸ ಗಣಿ ನೀತಿ ಜಾರಿ ಮಾಡುತ್ತೇವೆ. ರಾಜ್ಯದ ಎಲ್ಲ ಕಂದಾಯ ವಿಭಾಗದಲ್ಲೂ ಗಣಿ ಅದಾಲತ್ ಜಾರಿಯಾಗಲಿದೆ. ಪರವಾನಗಿ ನೀಡಲು ಏಕಗವಾಕ್ಷಿ ಯೋಜನೆ ಜಾರಿಗೆ ತರ್ತೇವೆ. ಗಣಿಗಾರಿಕೆ ನಡೆಸುವವರಿಗೆ ತರಬೇತಿ ಕೇಂದ್ರ ಆರಂಭಿಸುತ್ತೇವೆ ಎಂದು ಪರಿಷತ್ನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಹೇಳಿದರು.
ಗಣಿ ವಿಚಾರದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮ ಜರುಗಿಸಲಾಗುವುದು. ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವಲ್ಲಿ ಸ್ಫೋಟ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಪರಿಷತ್ನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಹೇಳಿದರು.