ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಸೇರಿದಂತೆ ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ರಾಜ್ಯ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು,, ಇದರೊಂದಿಗೆ ಕೊಡಗಿನ ಜನತೆಯ ಪ್ರತ್ಯೇಕ ವಿವಿ ಸ್ಥಾಪನೆಯ ಬಹು ಕಾಲದ ಬೇಡಿಕೆ ಈಡೇರಿದಂತಾಗಿದೆ.
ಕಳೆದ ಬಾರಿಯ ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಚಾಮರಾಜನಗರ, ಬೀದರ್, ಕೊಡಗು, ಹಾಸನ, ಹಾವೇರಿ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ 2022 ಕ್ಕೆ ಅನುಮೋದನೆ ನೀಡಿತ್ತು.
ಅದರಂತೆ ಇದೀಗ ಹೊಸ ವಿವಿಗಳ ಸ್ಥಾಪನೆಗೆ ಸೋಮವಾರ ಸರಕಾರ ಅಧಿಸೂಚನೆ ಹೊರಡಿಸಿದ್ದು, ಆ ದಿನದಿಂದಲೇ ವಿವಿಗಳ ಕೇಂದ್ರ ಸ್ಥಾನಗಳು ಜಾರಿಗೆ ಬರಲಿವೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.
ಮೈಸೂರು ವಿವಿಯಿಂದ ವಿಭಜಿಸಿರುವ ಚಾಮರಾಜನಗರ ವಿವಿಗೆ ಜಿಲ್ಲೆಯ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಕೇಂದ್ರ ಸ್ಥಳವಾಗಿದ್ದು, ಹಾಸನ ವಿವಿಗೆ ಜಿಲ್ಲೆಯ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಮಂಡ್ಯ ವಿವಿಗೆ ಜಿಲ್ಲೆಯ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಗುಲ್ಬರ್ಗಾ ವಿವಿಯಿಂದ ವಿಭಜನೆಯಾಗಿರುವ ಬೀದರ್ ವಿವಿಗೆ ಭಾಲ್ಕಿ ತಾಲೂಕಿನ ಹಾಲಹಳ್ಳಿಯ ಜ್ಞಾನ ಕಾರಂಜಿ ಮಂಗಳೂರು ವಿವಿಯಿಂದ ವಿಭಜಿಸಿರುವ ಕೊಡಗು ವಿವಿಗೆ ಕುಶಾಲನಗರದ ಚಿಕ್ಕ ಅಳುವಾರ, ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯಿಂದ ವಿಭಜಿಸಿರುವ ಕೊಪ್ಪಳ ವಿವಿಗೆ ತಳಕಲ್ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ರಾಣಿ ಚೆನ್ನಮ್ಮ ವಿವಿಯಿಂದ ವಿಭಜಿಸಿರುವ ಬಾಗಲಕೋಟಿ ವಿವಿಗೆ ಜಮಖಂಡಿ, ಕರ್ನಾಟಕ ವಿವಿಯಿಂದ ವಿಭಜಿಸಿರುವ ಹಾವೇರಿ ನೂತನ ವಿವಿಗೆ ಜಿಲ್ಲೆಯ ಕೆರೆಮತ್ತಿಹಳ್ಳಿಯನ್ನು ಕೇಂದ್ರ ಸ್ಥಳವನ್ನಾಗಿ ಗುರುತಿಸಿರುವುದಾಗಿ ಹೇಳಲಾಗಿದೆ.