ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ತಿಂಗಳ ಆರಂಭದಲ್ಲಿ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಬಹಿರಂಗಪಡಿಸಿದ್ದು, ಬಿತ್ತನೆಗೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ರೈತನಿಗೆ ಸಾಗುವಳಿ ಹೊರೆ ಮಾತ್ರ ಕಡಿಮೆಯಾಗುತ್ತಿಲ್ಲ. ಹೊಲ ಉಳುಮೆ ಮಾಡುವುದರಿಂದ ಹಿಡಿದು ಕಟಾವಿಗೆ ಬರುವವರೆಗೆ ನಾನಾ ರೀತಿಯ ಖರ್ಚು ಅನ್ನದಾತನನ್ನು ಬಾಧಿಸುತ್ತಿದೆ. ರೈತನ ಹೊರೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡುವುದರ ಜೊತೆಗೆ ರಸಗೊಬ್ಬರಗಳ ಬೆಲೆಯನ್ನು ನಿವಾರಿಸಲು ಕ್ರಮಗಳನ್ನು ಕೈಗೊಂಡಿದೆ. ರಸಗೊಬ್ಬರ ಬೆಲೆ ಏರಿಕೆಯಿಂದ ಕಂಗಾಲಾದ ಅನ್ನದಾತನ ಕಷ್ಟ ತೀರಿಸಲು ಕೇಂದ್ರವು ರಸಗೊಬ್ಬರದ ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ. ರಸಗೊಬ್ಬರ ಬೆಲೆಯಲ್ಲಿ 1.10 ಲಕ್ಷ ಕೋಟಿ ರೂ.ಗಳ ಸಹಾಯಧನವನ್ನು ಘೋಷಿಸಿದೆ. ಈ ನಿರ್ಧಾರದಿಂದ ಪ್ರಸಕ್ತ ಹಣಕಾಸು ವರ್ಷ 2022-23ರಲ್ಲಿ ಹೆಚ್ಚುವರಿಯಾಗಿ ಸರ್ಕಾರದ ಒಟ್ಟು ರಸಗೊಬ್ಬರ ಸಬ್ಸಿಡಿ 2.15 ಲಕ್ಷ ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ.
ವಿಶ್ವದಾದ್ಯಂತ ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆಯಾಗುತ್ತಿದೆ ಆದರೆ ದೇಶದ ರೈತರಿಗೆ ಹೊರೆಯಾಗದಂತೆ ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದ್ದಾರೆ. ಬಜೆಟ್ನಲ್ಲಿ 1.05 ಲಕ್ಷ ಕೋಟಿ ರೂಪಾಯಿಗಳ ರಸಗೊಬ್ಬರ ಸಬ್ಸಿಡಿ ಜೊತೆಗೆ, ರೈತರಿಗೆ ಪರಿಹಾರ ನೀಡಲು ಹೆಚ್ಚುವರಿಯಾಗಿ 1.10 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತಿದೆ ಎಂದು ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಯೂರಿಯಾ, ಪೊಟ್ಯಾಸಿಯಮ್ ಮತ್ತು ಫಾಸ್ಫೇಟ್ ರಸಗೊಬ್ಬರಗಳ ಅಂತರರಾಷ್ಟ್ರೀಯ ಬೆಲೆಗಳು ತೀವ್ರವಾಗಿ ಏರಿದೆ. ಇದು ರೈತರ ಮೇಲೆ ಪರಿಣಾಮ ಬೀರದಂತೆ ಕೇಂದ್ರ ಸರ್ಕಾರ ಸಬ್ಸಿಡಿ ಘೋಷಣೆ ಮಾಡಿದೆ
5/12 Despite rising fertilizer prices globally, we have protected our farmers from such price hikes. In addition to the fertilizer subsidy of ₹ 1.05 lakh crore in the budget, an additional amount of ₹ 1.10 lakh crore is being provided to further cushion our farmers.
— Nirmala Sitharaman (@nsitharaman) May 21, 2022