ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………….
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೇಂದ್ರ ಸರ್ಕಾರವು ಕೊರೋನಾ ವಿರುದ್ಧ ಸಮರ್ಪಕವಾಗಿ ಲಸಿಕೆಗಳನ್ನು ವ್ಯವಸ್ಥೆ ಮಾಡಿಕೊಳ್ಳದೇ ಲಸಿಕಾ ಅಭಿಯಾನ (ಟೀಕಾ ಉತ್ಸವ) ಆಚರಿಸಿತು ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರಕಾರ ಕೊರೋನಾ ವಿರುದ್ಧ ಗರಿಷ್ಠ ಸಂಖ್ಯೆಯ ಅರ್ಹ ಜನರಿಗೆ ಲಸಿಕೆ ನೀಡುವ ಉದ್ದೇಶದಿಂದ ಏಪ್ರಿಲ್ 11 ರಿಂದ 14ರವರೆಗೆ ಲಸಿಕೆ ಅಭಿಯಾನ ಹಮ್ಮಿಕೊಂಡಿತ್ತು. ಆದರೆ ಲಸಿಕಾ ಅಭಿಯಾನಕ್ಕೆ ಪೂರಕವಾಗಿ ಲಸಿಕೆಗಳನ್ನೇ ವ್ಯವಸ್ಥೆ ಮಾಡಿರಲಿಲ್ಲ. 30 ದಿನಗಳಲ್ಲಿ ದೇಶದಲ್ಲಿ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಶೇ 82ರಷ್ಟು ಕುಸಿತ ಕಂಡು ಬಂದಿದೆ ಎಂದು ದೂರಿದ್ದಾರೆ.
ಪ್ರಜೆಗಳಿಗೆ ಲಸಿಕೆ ನೀಡುವ ವಿಷಯದಲ್ಲಿ ಅಮೆರಿಕ, ಇಂಗ್ಲೆಂಡ್, ಟರ್ಕಿ ಮತ್ತು ಫ್ರಾನ್ಸ್ನಂತಹ ದೇಶಗಳ ಹಿಂದೆ ಭಾರತವಿದೆ ಎಂದು ಅವರು ಹೇಳಿದ್ದಾರೆ.ಮೋದಿ ಅವರು ಲಸಿಕಾ ಕಾರ್ಖಾನೆಗಳಿಗೆ ಭೇಟಿ ನೀಡಿದ್ದರು. ಅಲ್ಲಿ ಫೋಟೊಗಳನ್ನು ತೆಗೆಸಿಕೊಂಡಿದ್ದರು. ಆದರೆ ಅವರ ಸರ್ಕಾರವು ಲಸಿಕೆಗಾಗಿ ಮೊದಲ ಆದೇಶವನ್ನು ಜನವರಿ 2021ರಲ್ಲಿ ಏಕೆ ನೀಡಿತು?ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
ಲಸಿಕಾ ಅಭಿಯಾನವು ಪ್ರತಿ ಮನೆಯನ್ನು ತಲುಪದ ಹೊರತು ಕೋವಿಡ್ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.