ಹೊದಿಗಂತ ಡಿಜಿಟಲ್ ಡೆಸ್ಕ್:
ʻಗುರುಭ್ಯೋ ನಮಃʼ ಹಿಂದೂ ಸಂಸ್ಕೃತಿಯಲ್ಲಿ ಗುರುವನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ಮಾತಾ, ಪಿತಾ, ಗುರು, ಅತಿಥಿ ದೈವಂ ಎಂಬುದು ಪ್ರಸಿದ್ಧ ಸಂಸ್ಕೃತ ಅಭಿವ್ಯಕ್ತಿಯಾಗಿದ್ದು ಪ್ರತಿಯೊಬ್ಬರ ಬದುಕಲ್ಲೂ ಇವರೆಲ್ಲರೂ ಮಹತ್ವದ ಸ್ಥಾನ ಪಡೆದಿರುತ್ತಾರೆ. ಜ್ಞಾನ, ಶಿಕ್ಷಣ ಅಥವಾ ಕೌಶಲ್ಯದ ರೂಪದಲ್ಲಿ ನಾವು ಯಾರ ಆಶೀರ್ವಾದವನ್ನು ಪಡೆಯುತ್ತೇವೆಯೋ ಅವರೆಲ್ಲರನ್ನು ಗೌರವಿಸಲು ಮೀಸಲಾದ ದಿನವೇ ಈ ಗುರು ಪೂರ್ಣಿಮೆ.
ಆಷಾಢ ಹುಣ್ಣಿಮೆ ಅಂತಲೂ ಕರೆಯುವ ಗುರು ಪೂರ್ಣಿಮೆ ಈ ವರ್ಷ ಇಂದು (ಜುಲೈ 13) ಬಂದಿದೆ. ಭಾರತದಲ್ಲಿನ ಹಿಂದೂ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಧರ್ಮದವರಿಗೆ ಇಂದು ಪೂಜ್ಯ ದಿನವಾಗಿದೆ. ಆಚರಣೆಗಳು ಎಲ್ಲಾ ಧರ್ಮಗಳಲ್ಲಿ ಸಾಮಾನ್ಯವಾಗಿದ್ದರೂ ಮೂಲ ಕಥೆಗಳು ಒಂದಕ್ಕೊಂದು ವಿಭಿನ್ನವಾಗಿವೆ. ಪ್ರತಿಯೊಂದು ಧರ್ಮದಿಂದ ಹಬ್ಬದ ಹಿಂದಿನ ಮೂಲ ಕಥೆಗಳಿವೆ ತಿಳಿಯೋಣ ಬನ್ನಿ.
ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆಯ ಹಿನ್ನೆಲೆ
ಹಿಂದೂ ಪುರಾಣಗಳ ಪ್ರಕಾರ, ಶಿವನು ತನ್ನ ಜ್ಞಾನವನ್ನು ಏಳು ಅನುಯಾಯಿಗಳಿಗೆ ಅಥವಾ “ಸಪ್ತರ್ಷಿಗಳಿಗೆ” ವರ್ಗಾಯಿಸಿದ ದಿನವೆಂದು ಹೇಳಲಾಗುತ್ತದೆ. ತನ್ನ ಜ್ಞಾನವನ್ನು ಅನುಗ್ರಹಿಸಲು ಸಾಕ್ಷಾತ್ ಪರಶಿವನು ಯೋಗಿಯ ರೂಪ ಪಡೆದ ಮೊದಲ ಗುರುವಾದ್ದರಿಂದ ಶಿವನನ್ನು ಆದಿಯೋಗಿ ಅಂತಲೂ ಕರೆಯಲಾಗುತ್ತದೆ. ಅಮೂಲ್ಯವಾದ ಬೋಧನೆಗಳು ಮತ್ತು ಅವರ ಏಳು ಅನುಯಾಯಿಗಳನ್ನು ಗೌರವಿಸಲು ಗುರುಪೂರ್ಣಿಮೆ ಆಚರಿಸಲಾಗುತ್ತದೆ.
ಇನ್ನೊಂದು ಕತೆಯ ಪ್ರಕಾರ ಮಹಾಭಾರತ ರಚಿಸಿದ ವೇದವ್ಯಾಸರು ಆಷಾಢ ಮಾಸದ ಈ ಮಂಗಳಕರ ದಿನದಂದು ಜನಿಸಿದರು ಎಂಬ ನಂಬಿಕೆಯಿಂದಾಗಿ ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಮಹಾಭಾರತವನ್ನು ಗಣೇಶ ಲಿಖಿತ ರೂಪದಲ್ಲಿ ದಾಖಲಿಸಿದ್ದಾನೆ. ವೇದವ್ಯಾಸರ ಪರಂಪರೆಯನ್ನು ಮುಂದೆ ಅವರ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಮುಂದುವರಿಸಿದರು.
ಜೈನ ಧರ್ಮದಲ್ಲಿನ ಹಿನ್ನೆಲೆ ಕಥೆ
ಜೈನ ಧರ್ಮದ ಪುರಾಣದ ಪ್ರಕಾರ, ಜೈನ ಧರ್ಮದ ಅತ್ಯಂತ ಪ್ರಸಿದ್ಧ ತೀರ್ಥಕರಲ್ಲೊಬ್ಬರಾದ ಮಹಾವೀರ ಈ ದಿನದಂದು ತನ್ನ ಮೊದಲ ಅನುಯಾಯಿಯನ್ನು ಪಡೆದು ಅಧಿಕೃತವಾಗಿ ಗುರುವಾದರು ಎಂದು ನಂಬಲಾಗಿದೆ. ಆ ದಿನದಿಂದ, ಮಹಾವೀರ ಮತ್ತು ಅವನ ನಂತರ ಅನುಸರಿಸಿದ ಇತರ ಎಲ್ಲ ಗುರುಗಳ ಗೌರವಾರ್ಥವಾಗಿ ಜೈನ ಧರ್ಮವನ್ನು ಅನುಸರಿಸುವ ಜನರು ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ.
ಬೌದ್ಧ ಧರ್ಮದಲ್ಲಿ ಗುರು ಪೂರ್ಣಿಮೆಯ ಕಥೆ
ಗೌತಮ ಬುದ್ಧ ಈ ದಿನದಂದು ಸಾರನಾಥದಲ್ಲಿ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದರು ಎಂದು ನಂಬಲಾಗಿದೆ, ಪ್ರಸಿದ್ಧವಾದ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದ ಐದು ವಾರಗಳ ನಂತರ. ಧರ್ಮೋಪದೇಶವನ್ನು ಈ ಹುಣ್ಣಿಮೆಯ ದಿನದಂದು ನೀಡಿದನು. ಹಾಗಾಗಿಯೇ ಬೌದ್ಧರು ಗೌತಮ ಬುದ್ಧನಿಗೆ ಗೌರವ ಸಲ್ಲಿಸಲು ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ.