ಹೊಸದಿಗಂತ ವರದಿ ಶಿವಮೊಗ್ಗ:
ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಸಂಗೀತ ನಿರ್ದೇಶಕ ಹಂಸಲೇಖ ಬುಧವಾರ ಬೆಳಿಗ್ಗೆ ಚಾಲನೆ ನೀಡಿದರು. ಕುವೆಂಪು ಜನ್ಮಸ್ಥಳವಾದ ಕುಪ್ಪಳಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಹಂಸಲೇಖ, ನಮ್ಮ ನಾಡೇ ಒಂದು ಧ್ವಜ. ಇದೀಗ ನಾಡು ನುಡಿಗೆ ಅವಮಾನವಾಗುತ್ತಿದೆ.
ಕನ್ನಡದ ನಡೆ ಮುರಿಯುವವರ ವಿರುದ್ಧ ನಾವು ಹೋರಾಟ ನಡೆಸಬೇಕಿದೆ. ಭಾಷೆ ವಿಷಯ ಬಂದಾಗ ನಾವು ತಮಿಳರನ್ನು ಅನುಸರಿಸಬೇಕು. ತಮಿಳರು ಭಾಷೆ ವಿಚಾರಕ್ಕೆ ಬಂದರೆ ಆಡಳಿತ ಹಾಗೂ ವಿರೋಧ ಪಕ್ಷದವರು ಸಹ ಒಂದಾಗುತ್ತಾರೆ. ಹಿಂದೆ ನಾವು ಗೋಕಾಕ್ ಚಳವಳಿ ನಡೆಸಿದ್ದೆವು. ಈಗ ಕುಪ್ಪಳಿ ಹೋರಾಟ ಆರಂಭಿಸಿದ್ದೇವೆ. ಇಂದು ಕುಪ್ಪಳಿ ಕಹಳೆ ಊದಿದ್ದೇವೆ ಎಂದರು.