ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ 75 ಮನೆಗಳ ಹಸ್ತಾಂತರ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳಿಗಾಗಿ ನಗರದ ಹೊರವಲಯದ ಕೆ.ನಿಡುಗಣೆ ಗ್ರಾಮದಲ್ಲಿ ನಿರ್ಮಿಸಿರುವ ಬಡಾವಣೆಯನ್ನು ಶುಕ್ರವಾರ ಉದ್ಘಾಟಿಸಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು, ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಿದರು.
ಜಿಲ್ಲಾಡಳಿತ, ರಾಜೀವ್‍ಗಾಂಧಿ ವಸತಿ ನಿಗಮ, ಪ್ರಾಕೃತಿಕ ವಿಕೋಪ ಪುನರ್ ವಸತಿ ಯೋಜನೆಯಡಿ ನಿರ್ಮಿಸಲಾದ ಮನೆಗಳ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, 2018 ರ ಆಗಸ್ಟ್’ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ. ಈ ಮನೆಯನ್ನು ಬೇರೆಯವರಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮನೆಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಿಕೊಳ್ಳಬಾರದು. ಈಗಾಗಲೇ ಹಂಚಿಕೆ ಮಾಡಲಾಗಿರುವ ಸಂತ್ರಸ್ತರಿಗೆ ಬೇರೆ ಕಡೆ ಸ್ವಂತ ಮನೆ ಹೊಂದಿದ್ದಲ್ಲಿ ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ಅವರು ಸೂಚ್ಯವಾಗಿ ತಿಳಿಸಿದರು..
2018 ರಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮನೆ, ಮಠ ಆಸ್ತಿ-ಪಾಸ್ತಿ ಕಳೆದುಕೊಂಡರು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದಾಗ 9.85 ಲಕ್ಷ ರೂ. ವೆಚ್ಚದ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಅದರಂತೆ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತ್ರಸ್ತರು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ, ಒಳಚರಂಡಿ, ವಿದ್ಯುತ್ ದೀಪ ಸೇರಿದಂತೆ ಹಲವು ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಈಗಾಗಲೇ ಮಾದಾಪುರ, ಗಾಳಿಬೀಡು, ಬಿಳಿಗೇರಿ, ಮದೆನಾಡು ಇತರೆ ಕಡೆಗಳಲ್ಲಿ ಮನೆ ನಿರ್ಮಾಣ ಮಾಡಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಮನೆ ನಿರ್ಮಾಣದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣ ಅವರ ಪ್ರಯತ್ನ ಸಾಕಷ್ಟು ಇದೆ. ವಸತಿ ಸಚಿವರಾಗಿ ಮನೆಗಳ ಶೀಘ್ರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದ ಅಪ್ಪಚ್ಚುರಂಜನ್, ಮನೆ ಹಾಗೂ ಮನೆಯ ಸುತ್ತಮುತ್ತ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರತೀ ವರ್ಷ ಒಂದು ಸಾವಿರವನ್ನಾದರೂ ಪ್ರತೀ ಮನೆಯವರು ಸಂಗ್ರಹಿಸಿ ಸಮಿತಿ ಮಾದರಿಯಲ್ಲಿ ರಚನೆ ಮಾಡಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದರು.
ಮನೆ ಮುಂಭಾಗ ಶೆಡ್ ನಿರ್ಮಾಣ ಮಾಡಲು ಮುಂದಾಗಬಾರದು. ಹಿಂಬದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಶೆಡ್ ನಿರ್ಮಿಸಿಕೊಳ್ಳಬಹುದಾಗಿದೆ. ಮುಂಭಾಗದಲ್ಲಿ ಯಾವುದೇ ಕಾರಣಕ್ಕೂ ಮನೆಯ ನಕಾಶೆಯನ್ನು ಬದಲಿಸಬಾರದು ಎಂದು ಅವರು ಸಲಹೆ ಮಾಡಿದರು.
ಉತ್ತಮ ಶಿಕ್ಷಣ ನೀಡಿ: ಸಂತ್ರಸ್ತರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಬೇಕು ಎಂದ ಅವರು ಮೂರು ತಿಂಗಳಿಗೊಮ್ಮೆ ಬಡಾವಣೆಗೆ ಭೇಟಿ ನೀಡಿ ಅಹವಾಲು ಆಲಿಸಲಾಗುವುದು ಎಂದು ಹೇಳಿದರು.
ಜೀವ ವೈವಿದ್ಯ ಮಂಡಳಿ ರಾಜ್ಯ ಅಧ್ಯಕ್ಷ ನಾಪಂಡ ರವಿಕಾಳಪ್ಪ ಅವರು ಮಾತನಾಡಿ, 2018ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪವನ್ನು ಸ್ಮರಿಸಿಕೊಂಡರೆ ಇಂದಿಗೂ ಸಹ ಕನವರಿಕೆ ಉಂಟಾಗುತ್ತದೆ. ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ಮನೆಯನ್ನು ಒದಗಿಸಲಾಗಿದೆ ಎಂದರು.
ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗಿದ್ದು, ಮನೆಯ ಸುತ್ತಮುತ್ತ ತರಕಾರಿ, ಹಣ್ಣು, ಹೂ ಮತ್ತಿತರ ಗಿಡಗಳನ್ನು ನೆಟ್ಟು ಕೈತೋಟ ನಿರ್ಮಾಣ ಮಾಡುವಂತಾಗಬೇಕು. ಇದರಿಂದ ಪರಿಸರ ಸಂರಕ್ಷಿಸಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಕಂದಾಯ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಬಡಾವಣೆ ಅಭಿವೃದ್ಧಿ ಹಾಗೂ ಕುಂದುಕೊರತೆ ನಿವಾರಣೆಗೆ ಮುಂದಾಗಬೇಕು ಎಂದು
ಸಲಹೆ ಮಾಡಿದರು.
ಕೆ.ನಿಡುಗಣೆ ಗ್ರಾ.ಪಂ.ಪ್ರಾದೇಶಿಕ ಕಚೇರಿ ಬಳಿ ನಿರ್ಮಾಣವಾಗಿರುವ ಮನೆಗೆ ತುಂಬಾ ಬೇಡಿಕೆ ಇದೆ. ಆದ್ದರಿಂದ ಮನೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಒಂದು ಕಡೆ ಸ್ವಂತ ಮನೆಗೆ ಹೋಗುವ ಸಂತಸವಿದ್ದರೆ, ಮತ್ತೊಂದು ಕಡೆ ಇರುವ ಮನೆಯನ್ನು ಬಿಟ್ಟು ಬರುವ ನೋವು ಸಹ ಇರುತ್ತದೆ. ಒಟ್ಟಾರೆ ಎಲ್ಲವನ್ನೂ ಸಮತೋಲನವಾಗಿ ಸ್ವೀಕರಿಸಿ ಉತ್ತಮ ಬದುಕುಕೊಟ್ಟಿಕೊಳ್ಳಲು ಸಂತ್ರಸ್ತರು ಮುಂದಾಗಬೇಕು ಎಂದು ಡಾ..ಬಿ.ಸಿ.ಸತೀಶ ಅವರು ತಿಳಿಸಿದರು.
ಒಂದು ವರ್ಷ ನಿರ್ವಹಣೆ: ಬಡಾವಣೆಯನ್ನು ಒಂದು ವರ್ಷದವರೆಗೆ ನಿರ್ವಹಣೆ ಮಾಡಲಾಗುವುದು. ಮತ್ತೆ ಬಡಾವಣೆ ಕುಂದುಕೊರತೆ ಮತ್ತಿತರ ಸಂಬಂಧ ತಾವೇ ಪರಿಹರಿಸಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು. ಅರ್ಹರಲ್ಲದವರು ಮನೆ ಪಡೆದಿದ್ದಲ್ಲಿ ಪರಿಶೀಲಿಸಿ ಸರ್ಕಾರದ ನಿಯಮಗಳಂತೆ ಕ್ರಮವಹಿಸಲಾಗುವುದು ಎಂದರು.
ರಾಜೀವ್ ಗಾಂಧಿ ವಸತಿ ನಿಗಮದ ಯೋಜನಾ ನಿರ್ದೇಶಕ ಎಚ್.ಶ್ರೀನಿವಾಸ್ ಅವರು ಮಾತನಾಡಿ, ಈಗಾಗಲೇ ಕರ್ಣಂಗೇರಿಯಲ್ಲಿ 35 ಮನೆ, ಮದೆನಾಡು 80, ಜಂಬೂರು, ಮಾದಪುರ 383, ಬಿಳಿಗೇರಿ 22, ಕೆ.ನಿಡುಗಣೆ ಗ್ರಾಮದಲ್ಲಿ 75 ಹಾಗೆಯೇ ಗಾಳಿಬೀಡು ಗ್ರಾಮದಲ್ಲಿ 140 ರಲ್ಲಿ 60 ಮನೆಗಳನ್ನು ಹಸ್ತಾಂತರಿಸಲಾಗಿದೆ. ಒಟ್ಟಾರೆ ಇದುವರೆಗೆ 666 ಮನೆಗಳನ್ನು ಸಂತ್ರಸ್ತರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷ ಡೀನ್ ಬೋಪಣ್ಣ, ಉಪಾಧ್ಯಕ್ಷೆ ರೀಟಾ ಮುತ್ತಣ್ಣ, ತಹಶೀಲ್ದಾರ್ ಪಿ.ಎಸ್.ಮಹೇಶ್, ಗ್ರಾ.ಪಂ.ಸದಸ್ಯರು ಇತರರು ಇದ್ದರು. ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!