ಹೊಸದಿಗಂತ ವರದಿ,ಅಂಕೋಲಾ:
ಗಂಡನ ಮನೆಯವರ ಕಿರುಕುಳ ಸಹಿಸಲಾರದೇ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಸೆ ಗ್ರಾಮದ ಹಂದಿಗದ್ದೆಯಲ್ಲಿ ಸಂಭವಿಸಿದೆ.
ಯಮುನಾ ವಿಘ್ನೇಶ್ವರ ಗೌಡ (30) ಮೃತ ದುರ್ದೈವಿಯಾಗಿದ್ದು ಮಾದನಗೇರಿ ಬಳಲೆ ನಿವಾಸಿಯಾದ ಈಕೆಯನ್ನು ಕಳೆದ 7 ತಿಂಗಳ ಹಿಂದೆ ಬೆಳಸೆಯ ವಿಘ್ನೇಶ್ವರ ಬುಧವಂತ ಗೌಡ ಎಂಬಾತನಿಗೆ ವಿವಾಹ ಮಾಡಿ ಕೊಡಲಾಗಿತ್ತು.
ಮದುವೆಯಾಗಿ ಮೂರು ತಿಂಗಳ ನಂತರ ಗಂಡ ವಿಘ್ನೇಶ್ವರ ಗೌಡ ತನ್ನ ಮೈದುನನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿರುವುದರಿಂದ ಮೃತ ಯಮುನಾ ಗೌಡ ಆ ಕುರಿತು ಪ್ರಶ್ನೆ ಮಾಡಿದ್ದಳು ಎನ್ನಲಾಗಿದೆ.
ಅಂದಿನಿಂದ ಗಂಡ ವಿಘ್ನೇಶ್ವರ ಬುಧವಂತ ಗೌಡ, ಮೈದುನ ರವಿ ಬುಧವಂತ ಗೌಡ, ಮೈದುನನ ಹೆಂಡತಿ ಶ್ಯಾಮಲಾ ರವಿ ಗೌಡ ಮತ್ತು ಅತ್ತೆ ಸಾವಿತ್ರಿ ಬುಧವಂತ ಗೌಡ ಸೇರಿ ಮೃತ ಯಮುನಾಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತ ಬಂದಿದ್ದು ಈ ಕುರಿತು ತನ್ನ ತವರು ಮನೆಗೆ ಸಹ ತಿಳಿದಿದ್ದಳು ಎನ್ನಲಾಗಿದೆ.
ತವರು ಮನೆಯವರು ಈ ಕುರಿತು ಗಂಡನ ಮನೆಯವರಿಗೆ ಬುದ್ಧಿ ಹೇಳುವ ಪ್ರಯತ್ನ ಸಹ ನಡೆಸಿದ್ದು ಕಿರುಕುಳ ಮುಂದುವರಿಸಿದ ಆರೋಪಿತರು ಸಾಯುವಂತೆ ಪ್ರೇರೇಪಣೆ ನೀಡಿದ ಕಾರಣ ಸೋಮವಾರ ಬೆಳಗ್ಗೆ ತನ್ನ ಮನೆಯ ಮಹಡಿಯಲ್ಲಿರುವ ತನ್ನ ಕೊಠಡಿಯ ಕೋಣೆಯಲ್ಲಿ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಮೃತಳ ಸಹೋದರ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದು ಆರೋಪಿತರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.