ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯಲ್ಲಿ ರೈಲು ಹಳಿಗಳ ಮೇಲೆ ಕಗ್ಗಲ್ಲಿರಿಸಿ ವಿಧ್ವಂಸಕ ಕೃತ್ಯ ನಡೆಸಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿಗಳು ಲಭ್ಯವಾದ ಹಿನ್ನಲೆಯಲ್ಲಿ ರೈಲ್ವೆ ಭದ್ರತಾ ಪಡೆ, ಪೊಲೀಸ್ ಇಲಾಖೆ ನೆರವಿನೊಂದಿಗೆ ಸಮಗ್ರ ತನಿಖೆಗೆ ಮುಂದಾಗಿದೆ.
ಒಟ್ಟು ಏಳು ಕೇಂದ್ರಗಳಲ್ಲಿ ರೈಲು ಹಳಿ ಮೇಲೆ ಕಗ್ಗಲ್ಲು ಇರಿಸಿ, ಭಾರೀ ದುರಂತ ನಡೆಸುವ ಸಂಚುರೂಪಿಸಲಾಗಿದೆ ಎಂಬ ಶಂಕೆ ಬಲವಾಗಿ ಕಾಡಿದ್ದು, ರೈಲ್ವೇ ಇಂಟೆಲಿಜೆನ್ಸ್ ವಿಭಾಗ ಈ ಬೆಳವನಗೆಗಳನ್ನು ಗಂಭೀರವಾಗಿ ಪರಿಗಣಿಸಿ ವಿವಿಧ ಆಯಾಮಗಳೊಂದಿಗೆ ತನಿಖೆ ಕೈಗೆತ್ತಿಕೊಂಡಿದೆ.
ಉಪ್ಪಳ ಸನಿಹದ ಮುಟ್ಟಂ ಗೇಟ್, ಕೋಟಿಕುಳಂ, ಕಣ್ಣಾಪುರಂ, ಕಣ್ಣೂರ್ ಸೌತ್ವಳಪಟ್ಟಣಂ ಹಾಗೂ ಪಾಪಿನಶ್ಯೇರಿಯಲ್ಲಿ ರೈಲ್ವೆ ಹಳಿಯಲ್ಲಿ ಕಗ್ಗಲ್ಲು ಇರಿಸಿ ಹಳಿ ತಪ್ಪಿಸುವ ಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದಷ್ಟೇ ಉಪ್ಪಳ ಸನಿಹದ ಮುಟ್ಟಂ ಗೇಟ್ ಬಳಿ ಹಳಿಯಲ್ಲಿ ಬೃಹತ್ ಕಲ್ಲು ಪತ್ತೆಯಾಗಿದ್ದು, ಮಂಗಳೂರು-ಚೆನ್ನೈ ಮೈಲ್ ಎಕ್ಸ್ಪ್ರೆಸ್ ರೈಲಿನ ಲೊಕೋ ಪೈಲಟ್ ಗಮನಕ್ಕೆ ಬಂದ ಕಾರಣ ಭಾರೀ ಅವಘಡ ತಪ್ಪಿಹೋಗಿತ್ತು.