ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಭೈರಿದೇವರಕೊಪ್ಪದ ಸಾರ್ವಜನಿಕ ಸ್ಥಳದಲ್ಲಿದ್ದ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾದ ತೆರುವು ಕಾರ್ಯಾಚರಣೆ ಬುಧವಾರ ಬೆಳಿಗ್ಗೆ 6 ಗಂಟೆಗೆ ಆರಂಭವಾಗಿದ್ದು, ಗುರುವಾರ ಬೆಳಿಗ್ಗೆ 5 ಗಂಟೆಗೆ ಸಂಪೂರ್ಣವಾಗಿ ಮುಗಿದಿದೆ.
ಆದರೆ ದರ್ಗಾದಲ್ಲಿ ಇರುವ ಸಮುದಾಯದ ಮುಖಂಡರ ಗೋರಿಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಂಜುಮನ್ ಸಂಸ್ಥೆ ಮನವಿ ಮಾಡಿತ್ತು. ಇದಕ್ಕೆ ಅಧಿಕಾರಿಗಳು ಸ್ಪಂದಿಸಿ ಅನುಮತಿ ನೀಡಿದ್ದರು.
ಬಳಿಕ ಅಂಜುಮನ್ ಸಂಸ್ಥೆಯ ನುರಿತ ಎಂಜಿನಿಯರ್ ತಜ್ಞರ ಸಲಹೆ ಅನ್ವಯ ವಿವಿಧ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಾರ್ಯಾಚರಣೆ ಮುಂದುವರಿಸಿದರು. ಹಜರತ್ ಸೈಯ್ಯದ್ ಮಹ್ಮದ್ ಶಾ ಖಾದ್ರಿ ಅವರ ಗೋರಿ 10- 10 ಉದ್ದ-ಅಗಲವಿದ್ದು, ಅವರ ಇಬ್ಬರು ಶಿಷ್ಯಂದಿರ ಗೋರಿ 7-7 ಉದ್ದ-ಅಗಲವಿದೆ.
ಗೋರಿಗಳಿಗೆ ಯಾವುದೇ ರೀತಿ ಧಕ್ಕೆಯಾಗದಂತೆ ತೆರವುಗೊಳಿಸಿ ಸಮುದಾಯದ ಮುಖಂಡರ ಸಮ್ಮುಖದಲ್ಲಿ ವಿಧಿ ವಿಧಾನಗಳ ಮೂಲಕ ದರ್ಗಾ ಸ್ಥಳಾಂತರಿಸಿದ್ದಾರೆ. ಬಿಆರ್ ಟಿಎಸ್ ಯೋಜನೆ ಅನುಷ್ಠಾನಕ್ಕಾಗಿ ಐತಿಹಾಸಿಕ ದರ್ಗಾ ತೆರವು ಮಾಡಿದ್ದರಿಂದ ಮುಸ್ಲಿಂ ಅಷ್ಟೇ ಅಲ್ಲದೇ ಹಿಂದೂ ಸಮುದಾಯದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.