ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಾವಿನ ಸುದ್ದಿ ಕೇಳಿ ಧಾರ್ಮಿಕ ನಾಯಕ ದಲೈಲಾಮಾ ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರಿಗೆ ದಲೈಲಾಮಾ ಪತ್ರ ಬರೆದಿದ್ದು,ಭಾವುಕ ನುಡಿಗಳನ್ನಾಡಿದ್ದಾರೆ.
‘ಸಿಂಗ್ ಅರ್ಥಪೂರ್ಣವಾಗಿ ಬದುಕಿ ಹೋಗಿದ್ದಾರೆ. ಅವರು ನಮಗೆಲ್ಲರಿಗೂ ಸ್ಫೂರ್ತಿ. ನಾನು ಅವರನ್ನು ನನ್ನ ಪ್ರಾರ್ಥನೆಯಲ್ಲಿ ನೆನಪಿಸಿಕೊಳ್ಳುತ್ತೇನೆ. ಈ ದುಃಖದ ಸಮಯದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಸಂತಾಪವನ್ನು ಸೂಚಿಸುತ್ತಿದ್ದೇನೆ’ ಎಂದು ಅವರು ಬರೆದಿದ್ದಾರೆ.
ʼಪ್ರತಿ ಬಾರಿ ಭೇಟಿಯಾದಾಗಲೂ ಅವರು ನನ್ನ ಬಗ್ಗೆ ಅತೀವ ಕಾಳಜಿ ತೋರುತ್ತಿದ್ದರು. ಉತ್ತಮ ಸಲಹೆಗಳನ್ನು ನೀಡುತ್ತಿದ್ದರು. ಅವರು ನನಗೆ ಹಿರಿಯಣ್ಣನಂತಿದ್ದರು. ನಿಮ್ಮ ಪತಿ ಇತರರಿಗೆ ಸಹಾಯ ಮಾಡುವ ಗುಣವನ್ನು ಹೊಂದಿದ್ದರು. ಅವರಿಂದ ನಾವು ಪ್ರೇರಣೆಗೊಂಡಿದ್ದೇವೆ. ಅವರು ಭಾರತದ ಅಭಿವೃದ್ಧಿಗೆ ಮತ್ತು ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕೋಟ್ಯಂತರ ಜನ ಸಾಮಾನ್ಯರ ಜೀವನವನ್ನು ಸುಧಾರಿಸಿದ್ದಾರೆ. ಅವರು ಟಿಬೆಟಿಯನ್ ಜನರಿಗೆ ಉತ್ತಮ ಸ್ನೇಹಿತರಾಗಿದ್ದರು ಎಂದು ದಲೈಲಾಮಾ ತಮ್ಮ ಪತ್ರದ ಬಾಂಧವ್ಯವನ್ನು ನೆನಪು ಮಾಡಿಕೊಂಡಿದ್ದಾರೆ.